
ನಿರಂಜನಾನಂದಪುರಿ ಸ್ವಾಮೀಜಿ
ಹಾವೇರಿ: ‘ಮಠಾಧೀಶರು ಹೇಳಿದ ತಕ್ಷಣ, ಅವರು ಹೇಳಿದವರನ್ನು ಮುಖ್ಯಮಂತ್ರಿ ಮಾಡಲು ಸಂವಿಧಾನದಲ್ಲಿ ಅವಕಾಶ ಇದೆಯಾ ?. ಮುಖ್ಯಮಂತ್ರಿ ಬದಲಾವಣೆ ಮಾಡುವುದು ಹಾಗೂ ಆಯ್ಕೆ ಮಾಡುವುದು ಶಾಸಕರಿಗಿರುವ ಅಧಿಕಾರ. ಮುಖ್ಯಮಂತ್ರಿ ಯಾರು ಆಗಬೇಕು ಎನ್ನುವುದನ್ನು ಶಾಸಕರು ನಿರ್ಣಯ ಮಾಡುತ್ತಾರೆ. ಈ ವಿಚಾರದಲ್ಲಿ ಮಠಾಧೀಶರು ಮಧ್ಯ ಪ್ರವೇಶ ಮಾಡುವುದು ಸೂಕ್ತವಲ್ಲ’ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮುಖ್ಯಮಂತ್ರಿಯಾಗಬೇಕು’ ಎಂದು ನಿರ್ಮಲಾನಂದ ಸ್ವಾಮೀಜಿ ನೀಡಿರುವ ಹೇಳಿಕೆ ಕುರಿತು ಹಾವೇರಿಯಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ನಾಯಕರು ಮುಖ್ಯಮಂತ್ರಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅವರೇ ಸೂಕ್ತ ಅಭಿಪ್ರಾಯ ತೆಗೆದುಕೊಂಡು ನಿರ್ಣಯ ಮಾಡುತ್ತಾರೆ. ಪಕ್ಷದ ವಿಚಾರಗಳಲ್ಲಿ ಸ್ವಾಮೀಜಿಗಳು ಮಧ್ಯೆ ಪ್ರವೇಶಿಸಿ, ಗೊಂದಲದ ಮಾಡೋದು ಸೂಕ್ತವಲ್ಲ’ ಎಂದರು.
‘ಸಿದ್ದರಾಮಯ್ಯ ಅವರನ್ನು ರಾಜ್ಯದ ಜನರು, ಕೇವಲ ಕುರುಬ ಸಮುದಾಯದ ವ್ಯಕ್ತಿಯಾಗಿಲ್ಲ ನೋಡಿಲ್ಲ. ರಾಜ್ಯದ ಪ್ರತಿನಿಧಿಯಾಗಿ ಸಮರ್ಥವಾಗಿ ಆಡಳಿತ ಮಾಡುತ್ತಿದ್ದಾರೆ. ಪಕ್ಷದ ತಿರ್ಮಾನಕ್ಕೆ ಬದ್ಧರಾಗಿ ಇರುವುದಾಗಿಯೂ ಹೇಳಿದ್ದಾರೆ. ರಾಜ್ಯದಲ್ಲಿ ಹಲವು ಸಮುದಾಯಗಳಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಪಕ್ಷದವರು ಸೂಕ್ತ ತಿರ್ಮಾನ ಮಾಡಲು ನಾವು ಅವಕಾಶ ಕೊಡಬೇಕು. ಸ್ವಾಮೀಜಿ ಜಾತಿ ಹಿನ್ನೆಲೆಯಲ್ಲಿ ಮಾತನಾಡಬಾರದಿತ್ತು. ಅದು ಅವರ ಸ್ಥಾನಕ್ಕೆ ಒಳ್ಳೆಯದಲ್ಲ. ಇತರೆ ಸಮುದಾಯಗಳನ್ನು ಅವಮಾನಿಸಿದಂತೆ ಆಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.