ADVERTISEMENT

ಸಿಎನ್‌ಜಿ ಕೊಳವೆ ಜಾಲ ನಿರ್ಮಾಣಕ್ಕೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:15 IST
Last Updated 21 ನವೆಂಬರ್ 2018, 20:15 IST

ಬೆಂಗಳೂರು: ದೇಶದ 14 ರಾಜ್ಯಗಳ 124 ಜಿಲ್ಲೆಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ ಸರಬರಾಜು ಜಾಲ ನಿರ್ಮಾ ಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನವದೆಹಲಿಯಲ್ಲಿ ಇಂದು ಚಾಲನೆ ನೀಡಲಿದ್ದಾರೆ. ಇದರಲ್ಲಿ ರಾಜ್ಯದ ಆರು ಜಿಲ್ಲಾ ವಿಭಾಗಗಳು ಸೇರಿವೆ.

ರಾಜ್ಯದ ರಾಮನಗರ, ಚಿತ್ರದುರ್ಗ–ದಾವಣಗೆರೆ, ಬಳ್ಳಾರಿ–ಗದಗ, ಬೀದರ್,ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ ವಿಭಾಗಗಳಲ್ಲಿ ಈ ಅನಿಲ ಪೂರೈಕೆ ಜಾಲ ನಿರ್ಮಾಣಗೊಳ್ಳಲಿದೆ.

ಈ ಬೃಹತ್‌ ಯೋಜನೆಯಲ್ಲಿ ಜಿಎಐಎಲ್‌, ಮಹಾರಾಷ್ಟ್ರ ನ್ಯಾಚುರಲ್‌ ಗ್ಯಾಸ್‌ ಲಿ., ಯುಇಪಿಎಲ್‌ ಕಂಪನಿಗಳು ಬಂಡವಾಳ ತೊಡಗಿಸುತ್ತಿವೆ. ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಯೋಜನೆಗೆ ಧನಸಹಾಯ ನೀಡುತ್ತಿದೆ. ಈ ಕಾಮಗಾರಿ ಮುಗಿಯಲು ಎಂಟು ವರ್ಷ ಬೇಕು ಎಂದು ಅಂದಾಜಿಸಲಾಗಿದೆ.ದೇಶದಲ್ಲಿ ನೈಸರ್ಗಿಕ ಅನಿಲ ಬಳಕೆ ಉತ್ತೇಜಿಸಲು ಕೇಂದ್ರ ಸರ್ಕಾರ ₹ 70,000 ಕೋಟಿ ವಿನಿಯೋಗಿಸಲು ಯೋಜಿಸಿದೆ.

ADVERTISEMENT

ರಾಜ್ಯದಲ್ಲಿ ಆರಂಭವಾಗುವ ಕಾಮಗಾರಿಯ ಕುರಿತುಮಹಾರಾಷ್ಟ್ರ ನ್ಯಾಚುರಲ್‌ ಗ್ಯಾಸ್‌ ಲಿಮಿಟೆಡ್‌ನ ನಿರ್ದೇಶಕ (ವಾಣಿಜ್ಯ) ಎಸ್‌. ಸಂತೋಷ್‌ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.

‘ಪ್ರತಿ ಜಿಲ್ಲಾ ಕೇಂದ್ರದ ಹೊರವಲಯದಲ್ಲಿ ಸಿಎನ್‌ಜಿ ಸರಬರಾಜಿನ ಪ್ರಾದೇಶಿಕ ಘಟಕವೊಂದನ್ನು ನಿರ್ಮಿಸುತ್ತೇವೆ. ಅಲ್ಲಿಂದ ಗ್ರಾಹಕರ ಮನೆಗಳಿಗೆ, ಕೈಗಾರಿಕೆಗಳಿಗೆ ಕೊಳವೆ ಮೂಲಕ ರವಾನಿಸುತ್ತೇವೆ. ಈ ಜಿಲ್ಲಾ ವಿಭಾಗಗಳಲ್ಲಿ ಪೆಟ್ರೋಲ್‌ ಬಂಕ್‌ಗಳ ಮಾದರಿಯಲ್ಲಿ 218 ಸಿಎನ್‌ಜಿ ಸ್ಟೇಷನ್‌ಗಳನ್ನೂ ನಿರ್ಮಿಸುತ್ತೇವೆ. ಸಿಎನ್‌ಜಿಯಿಂದ ಚಲಿಸುವ ವಾಹನಗಳು ಅಲ್ಲಿ ಇಂಧನವನ್ನು ಭರ್ತಿ ಮಾಡಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

‘ಎಲ್‌ಪಿಜಿಗೆ (ಲಿಕ್ವಿಡ್‌ ಪೆಟ್ರೋಲಿಯಂ ಗ್ಯಾಸ್‌) ಹೋಲಿಸಿದರೆ ಸಿಎನ್‌ಜಿ ಇಂಧನ ಶೇ 40ರಷ್ಟು, ಪೆಟ್ರೊಲ್‌ಗಿಂತ ಶೇ 60ರಷ್ಟು ಹಾಗೂ ಡೀಸೆಲ್‌ಗಿಂತ ಶೇ 45ರಷ್ಟು ಅಗ್ಗವಾಗಿದೆ. ಪರಿಸರ ಸ್ನೇಹಿಯೂ ಆಗಿದೆ’ ಎಂದರು.

ಅಂಕಿ–ಅಂಶ

7.34 ಲಕ್ಷ
ಈ ಯೋಜನೆಯಿಂದ ರಾಜ್ಯದ ಮನೆಗಳಿಗೆ ಅನಿಲ ಸಂಪರ್ಕ ಸಿಗಲಿದೆ

8 ವರ್ಷ
ಕೊಳವೆಜಾಲ ನಿರ್ಮಾಣಕ್ಕೆ ತಗಲುವ ಕಾಲಾವಧಿ

ಶೇ 6.2

ದೇಶದಲ್ಲಿ ಇಂಧನವಾಗಿ ಬಳಕೆಯಾಗುತ್ತಿರುವ ಸಿಎನ್‌ಜಿ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.