ADVERTISEMENT

ವಾಣಿಜ್ಯ ತೆರಿಗೆ ಇಲಾಖೆ ಹಗರಣ ಬಯಲಿಗೆಳೆದ ಉಪಾಸೆಗೆ 5 ತಿಂಗಳಲ್ಲಿ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 18:56 IST
Last Updated 24 ಜೂನ್ 2022, 18:56 IST
ಸಂಗಮೇಶ ಉಪಾಸೆ
ಸಂಗಮೇಶ ಉಪಾಸೆ   

ಕಲಬುರಗಿ: ವಾಣಿಜ್ಯ ತೆರಿಗೆ ಇಲಾಖೆಯ ಇಲ್ಲಿನ ಕಚೇರಿಯಲ್ಲಿನ ಟಿಡಿಎಸ್ ಫಾರಂ ದುರ್ಬಳಕೆ ಮಾಡಿಕೊಂಡು ಕೋಟಿಗಟ್ಟಲೇ ಹಣ ಲೂಟಿ ಮಾಡಿದ್ದ ಹಗರಣ ಬಯಲಿಗೆ ಎಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಇಲಾಖೆಯ ಜಂಟಿ ಆಯುಕ್ತ ಸಂಗಮೇಶ ಉಪಾಸೆ ಅವರಿಗೆ ಐದೇ ತಿಂಗಳಲ್ಲಿ ಬೆಂಗಳೂರಿಗೆ ವರ್ಗಾವಣೆಯಾಗಿದೆ.

ಇಲ್ಲಿನ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ‘ಟಿಡಿಎಸ್‌ ಮರುಪಾವತಿ’ ನೆಪದಲ್ಲಿ ಕೋಟ್ಯಂತರ ಹಣ ಕಬಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಪಂಡರಿನಾಥ, ಹೊರಗುತ್ತಿಗೆ ನೌಕರ ಮೊಹಮ್ಮದ್ ರಹೀಲ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

‘ಮೆ.ರಿದನಾಲ್‌ ವಾಟರ್‌ ಪ್ಯುರಿಫಯರ್ ಎಂಬ ನಕಲಿ ಸಂಸ್ಥೆ ಹುಟ್ಟುಹಾಕಿ, ಈವರೆಗೆ ₹ 2 ಕೋಟಿಗೂ ಅಧಿಕ ಹಣ ಕಬಳಿಸಿದ್ದನ್ನು ಸಂಗಮೇಶ ಉಪಾಸೆ ಪತ್ತೆ ಮಾಡಿ ಕಾನೂನು ಕ್ರಮಕ್ಕೆ ಮುಂದಾಗಿದ್ದರು. ಅಷ್ಟರಲ್ಲಿ ಅವರನ್ನು ಬೆಂಗಳೂರಿಗೆ ವರ್ಗಾಯಿಸಿ, ಕೇಂದ್ರ ಕಚೇರಿಯಲ್ಲಿ ಕಾನೂನು ವ್ಯವಹಾರಗಳ ಜಂಟಿ ಆಯುಕ್ತರನ್ನಾಗಿ ನಿಯೋಜಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.