ADVERTISEMENT

ಕಮಿಷನ್‌ ಆರೋಪ: ದೇಗುಲದಲ್ಲಿ ಆಣೆ–ಪ್ರಮಾಣ ಮಾಡಿದ ಮಾಗಡಿ ಶಾಸಕರ ಪತ್ನಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 14:58 IST
Last Updated 14 ಮಾರ್ಚ್ 2023, 14:58 IST
   

ರಾಮನಗರ: ಗುತ್ತಿಗೆದಾರರ ಜೊತೆ ಶಾಮೀಲಾಗಿ ಕಮಿಷನ್ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮಾಗಡಿ ಶಾಸಕ ಎ. ಮಂಜುನಾಥ್ ಅವರ ಪತ್ನಿ ಲಕ್ಷ್ಮಿ ಮಂಗಳವಾರ ಮಾಗಡಿಯ ರಂಗನಾಥಸ್ವಾಮಿ ದೇಗುಲದ ಮುಂಭಾಗ ಕರ್ಪೂರ ಹಚ್ಚಿ, ಈಡುಕಾಯಿ ಒಡೆದು ಆಣೆ–ಪ್ರಮಾಣ ಮಾಡಿದರು.

‘ ಮಾಜಿ ಶಾಸಕರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಅವರ ಎಲ್ಲ ಆರೋಪಗಳು ಸುಳ್ಳು ಎಂಬುದನ್ನು ಸಾಬೀತುಪಡಿಸುವ ಸಲುವಾಗಿ ನಾನು ಇಂದು ದೇಗುಲದ ಮುಂಭಾಗ ಕರ್ಪೂರ ಹಚ್ಚಿದ್ದೇನೆ. ನಾನು ತಪ್ಪು ಮಾಡಿದ್ದರೆ ಭಗವಂತ ನನಗೆ ಶಿಕ್ಷೆ ನೀಡಲಿ. ನನ್ನ ಮೇಲೆ ಮಾಡಿರುವ ಎಲ್ಲ ಆರೋಪಗಳು ನಿಜ ಎಂದು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಸಹ ದೇಗುಲಕ್ಕೆ ಬಂದು ಆಣೆ ಮಾಡಲಿ’ ಎಂದು ಅವರು ಸವಾಲು ಹಾಕಿದರು.

‘ ನನ್ನ ಪತಿಗೆ ಕಾರ್ಯಗಳ ಒತ್ತಡ ಇರುವ ಕಾರಣ ನಾನೂ ಅವರಿಗೆ ವಿವಿಧ ಕೆಲಸಗಳಲ್ಲಿ ಸಾಥ್ ನೀಡುತ್ತಿದ್ದೇನೆ. ಆದರೆ ಎಂದು ಗುತ್ತಿಗೆದಾರರ ಜೊತೆ ನೇರವಾಗಿ ವ್ಯವಹರಿಸಿಲ್ಲ. ಈ ಬಗ್ಗೆ ದಾಖಲೆಗಳು ಇದ್ದಲ್ಲಿ ಬಿಡುಗಡೆ ಮಾಡಲಿ’ ಎಂದು ಆಗ್ರಹಿಸಿದರು.

ADVERTISEMENT

ಗುತ್ತಿಗೆದಾರ ಚಿಕ್ಕಣ್ಣ ಎಂಬುವರೂ ಗರುಡಗಂಬದ ಮುಂದೆ ಕರ್ಪೂರ ಹಚ್ಚಿ, ತಾವು ಯಾವುದೇ ಅವ್ಯವಹಾರ ನಡೆಸಿಲ್ಲ ಎಂದು ಆಣೆ ಮಾಡಿದರು.

ಆರೋಪವೇನು?: ‘ ಮಂಜುನಾಥ್‌ ಅವರ ಪತ್ನಿ ಹಾಗೂ ಗುತ್ತಿಗೆದಾರ ಚಿಕ್ಕಣ್ಣ ಎಂಬುವರು ಸೇರಿ ಸರ್ಕಾರದ ₹8 ಕೋಟಿ ಮೊತ್ತದ ಕಾಮಗಾರಿಗಳ ಗುತ್ತಿಗೆ ವ್ಯವಹಾರ ಮಾಡುತ್ತಿದ್ದಾರೆ. ಶಾಸಕರ ಪತ್ನಿ ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿದ್ದಾರೆ. ಹಣ ಕೊಡದೇ ಇದ್ದರೆ ಕಾಮಗಾರಿ ನಿಲ್ಲಿಸುತ್ತಾರೆ ’ ಎಂದು ಮಾಗಡಿಯ ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಈಚೆಗೆ ಆರೋಪ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.