ಬೆಂಗಳೂರು: ಸಹಬಾಳ್ವೆ ಉಡುಪಿ ಮತ್ತು ರಾಜ್ಯದ ಸೌಹಾರ್ದಪರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ರಾಜ್ಯ ಮಟ್ಟದ ಸಾಮರಸ್ಯ ನಡಿಗೆ ಮತ್ತು ಸಹಬಾಳ್ವೆ ಸಮಾವೇಶ ಇದೇ 14ರಂದು ಉಡುಪಿಯಲ್ಲಿ ನಡೆಯಲಿದೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ದಲಿತ ಮುಖಂಡ ಮಾವಳ್ಳಿ ಶಂಕರ್, ‘ಉಡುಪಿಯ ಅಜ್ಜರ
ಕಾಡು ಬಳಿಯ ಹುತಾತ್ಮ ಚೌಕದಿಂದ ಮಧ್ಯಾಹ್ನ 2 ಗಂಟೆಗೆ ಸಾಮರಸ್ಯ ನಡಿಗೆಗೆ ಚಾಲನೆ ನೀಡಲಾಗುವುದು. ಕ್ರಿಶ್ಚಿಯನ್ ಶಾಲೆಯ ಮೈದಾನದಲ್ಲಿ ಸಂಜೆ 4 ಗಂಟೆಗೆ ಸಹಬಾಳ್ವೆ ಸಮಾವೇಶ ನಡೆಯಲಿದೆ’ ಎಂದರು.
‘ಸಮಾವೇಶವನ್ನು ವಿವಿಧ ಧರ್ಮ ಗುರುಗಳು ಉದ್ಘಾಟಿಸಲಿದ್ದಾರೆ. ಗುರು ದೇವ ಪಟ್ಟದೇವರು, ಸುಗುಣೇಂದ್ರ ತೀರ್ಥ ಸ್ವಾಮೀಜಿ, ಮಾತೆ ಬಸವಾಂಜಲಿ ದೇವಿ, ಬಸವಪ್ರಕಾಶ್ ಸ್ವಾಮೀಜಿ, ವರ್ಗೀಸ್ ಮಾರ್ ಮಕರಿಯೋಸ್, ಫಾ.ಚೇತನ್ ಲೋಬೊ, ಮೌಲಾನ ಇಫ್ತಿಕಾರ್ ಅಹ್ಮದ್ ಖಾಸ್ಮಿ, ಜ್ಞಾನಿ ಬಲ ರಾಜ್ ಸಿಂಗ್, ಯೋಗೇಂದ್ರ ಯಾದವ್, ರೊನಾಲ್ಡ್ ಕೊಲಾಸೊ, ಶಶಿಕಾಂತ್ ಸೆಂಥಿಲ್ ಸೇರಿದಂತೆ ಹಲವರು ಭಾಗ ವಹಿಸಲಿದ್ದಾರೆ’ ಎಂದರು.
‘ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಕೆಲ ಕಿಡಿಗೇಡಿಗಳು ಹಾಗೂ ಸಂಘಟನೆ ಗಳು ಮಾಡುತ್ತಿವೆ. ಸಾಮರಸ್ಯ ಕದಡುವುದನ್ನು ತಡೆಯಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಅವರು ಹೇಳಿದರು.
ಸಾಹಿತಿ ಕೆ.ಷರೀಫಾ, ‘ಧರ್ಮ ಮತ್ತು ರಾಜಕಾರಣದ ಅಪಮಿತ್ರ ಮೈತ್ರಿಯ ಕೂಸು ಕೋಮುವಾದ.ಹಿಂದೂ–ಮುಸ್ಲಿಂ ಸಾಮರಸ್ಯ ದಿನೇ ದಿನೇ ಹಾಳಾಗುತ್ತಿದೆ. ಅಂದು ಸ್ವಾತಂತ್ರ್ಯಕ್ಕಾಗಿ ಎಲ್ಲ ಧರ್ಮದವರು ಒಗ್ಗಟ್ಟಾಗಿ ಹೋರಾಡಿದರು. ಈಗ ರಾಜ್ಯದಲ್ಲಿ ನಡೆಯ ಬೇಕಿರುವುದುಎರಡನೇ ಸ್ವಾತಂತ್ರ್ಯ ಸಮರ’ ಎಂದರು.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಮೋಹನ್ ರಾಜ್, ರೈತ ಮುಖಂಡ ವೀರಸಂಗಯ್ಯ, ಬಹುತ್ವ ಕರ್ನಾಟಕದ ವಿನಯ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.