ಡಿ.ಕೆ.ಶಿವಕುಮಾರ್
ಬೆಂಗಳೂರು: ನಿಗಮ–ಮಂಡಳಿಗಳಿಗೆ ಪಕ್ಷಕ್ಕಾಗಿ ದುಡಿದವರನ್ನು ಒಳಗೊಂಡ 650 ನಿರ್ದೇಶಕ ಸ್ಥಾನಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಮೂರು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರ ಪರಿಶ್ರಮವನ್ನು ಪಕ್ಷ ಗುರುತಿಸುತ್ತದೆ. ನಿಗಮ–ಮಂಡಳಿಗಳ ಅಧ್ಯಕ್ಷರೂ ಸೇರಿದಂತೆ ನೇಮಕವಾದ ಎಲ್ಲರಿಗೂ ಎರಡು ವರ್ಷಗಳ ಅವಧಿ ನೀಡಲಾಗುತ್ತಿದ್ದು, ನಂತರ ಇತರರಿಗೆ ಸ್ಥಾನ ನೀಡಲಾಗುವುದು ಎಂದರು.
ಪಕ್ಷಕ್ಕೆ ದುಡಿದ ಸುಮಾರು ಸಾವಿರ ಕಾರ್ಯಕರ್ತರಿಗೆ ಮುಂದಿನ ದಸರಾ ಕಾರ್ಯಕ್ರಮಕ್ಕೆ ಪಕ್ಷದಿಂದಲೇ ಆಹ್ವಾನ ನೀಡಲಾಗುವುದು. ಎಲ್ಲಾ ಭಾಗದವರೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾಗಬೇಕು ಎನ್ನುವುದು ಪಕ್ಷದ ಆಶಯ ಎಂದು ಹೇಳಿದರು.
16 ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆ
ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷರಾಗಿ ಶತಮಾನ ಕಳೆದಿದ್ದು, ಈ ವರ್ಷವನ್ನು ಪಕ್ಷದ ಸಂಘಟನಾ ವರ್ಷವಾಗಿ ಆಚರಿಸಲಾಗುವುದು. 16 ಜಿಲ್ಲಾ ಘಟಕಗಳ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರನ್ನು ಬದಲಾವಣೆ ಮಾಡಲು ಸಿದ್ಧತೆ ನಡೆದಿದೆ. ಆಯ್ಕೆ ಪರಿಶೀಲನೆಗೆ ದೆಹಲಿಯಿಂದಲೇ ತಂಡ ಬರಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಗಾಂಧಿ ಜ್ಯೋತಿ ಮೆರವಣಿಗೆ ನಡೆಸಲಾಗುವುದು. ನಿಗಮ–ಮಂಡಳಿ ಅಧ್ಯಕ್ಷರಿಗೆ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ನೀಡಲಾಗುವುದು. ಕಾಂಗ್ರೆಸ್ ಸಂಸ್ಥಾಪನಾ ದಿನದ ವೇಳೆಗೆ ಗಾಂಧಿ ಜ್ಯೋತಿ ಮೆರವಣಿಗೆ ಮುಕ್ತಾಯಗೊಳ್ಳಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.