ಬೆಂಗಳೂರು: ‘ಸಿರಿಧಾನ್ಯಕ್ಕೆ ಜಾಗತಿಕ ಮನ್ನಣೆ ಸಿಗಲು ಕಾಂಗ್ರೆಸ್ ಪಕ್ಷವೇ ಕಾರಣ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಹೇಳಿದ್ದಾರೆ.
ಟ್ವೀಟ್ ಮಾಡಿರುವ ಅವರು, ‘ಕಡು ಬಡವನ ಆಹಾರ ಸಿರಿಧಾನ್ಯಕ್ಕೆ ಈಗ ಜಾಗತಿಕ ಮನ್ನಣೆ ಸಿಕ್ಕಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಒಕ್ಕೂಟ 2023ನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ವಾಗಿ ಆಚರಿಸುವುದಾಗಿ ಘೋಷಿಸಿದೆ. ಸಿರಿಧಾನ್ಯಕ್ಕೆ ಜಾಗತಿಕ ಮನ್ನಣೆ ಸಿಗಲು ಕಾಂಗ್ರೆಸ್ ಕಾರಣ’ ಎಂದಿದ್ದಾರೆ.
‘ಸಿರಿಧಾನ್ಯಕ್ಕೆ ಮನ್ನಣೆ ನೀಡುವಂತೆ 2017-18ರಲ್ಲಿ ಕೃಷಿ ಸಚಿವರಾಗಿದ್ದ ಕೃಷ್ಣಬೈರೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು. ಅಲ್ಲದೆ, ಆಹಾರ ಮತ್ತು ಕೃಷಿ ಒಕ್ಕೂಟದ ಆಹ್ವಾನದ ಮೇರೆಗೆ ರೋಮ್ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಸಿರಿಧಾನ್ಯಗಳ ಮಹತ್ವ ವಿವರಿಸಿ, ಸಿರಿಧಾನ್ಯಗಳ ವರ್ಷಾಚರಣೆ ಘೋಷಣೆಗೆ ಮನವಿ ಮಾಡಿದ್ದರು’ ಎಂದು ಅವರು ತಿಳಿಸಿದ್ದಾರೆ.
‘ನಮ್ಮ ಪಕ್ಷದ ಮನವಿ ಪುರಸ್ಕರಿಸಿ ವಿಶ್ವಸಂಸ್ಥೆಯ ಎಫ್ಎಒಗೆ ಕೇಂದ್ರ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಇದು ಕರ್ನಾಟಕದ ಸಿರಿಧಾನ್ಯ ಆಂದೋಲನಕ್ಕೆ ಸಂದ ಗೌರವ. ಆದರೆ, ಕರ್ನಾಟಕ ಸರ್ಕಾರದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ’ ಎಂದು ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.