ADVERTISEMENT

ಯುವಜನೋತ್ಸವ ಅಲ್ಲ, ಯುವಜನ ವಿನಾಶೋತ್ಸವ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 20:21 IST
Last Updated 11 ಜನವರಿ 2023, 20:21 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ‘ನಿರುದ್ಯೋಗ, ಸರ್ಕಾರಿ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ಶಿಕ್ಷಣ ಕ್ಷೇತ್ರದ ನಿರ್ಲಕ್ಷ್ಯ ಮತ್ತು ಕೋಮುಗಲಭೆಗಳಿಗೆ ಬಲಿಯಾಗುತ್ತಿರುವ ರಾಜ್ಯದ ಯುವ ಸಮುದಾಯವನ್ನು ಅಣಕಿಸುವಂತೆ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಲು ಪ್ರಧಾನಿ ನರೆಂದ್ರ ಮೋದಿ ಬರುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.

‘ರಾಜ್ಯದಲ್ಲಿ ಸದ್ಯ 25ಲಕ್ಷಕ್ಕೂ ಮಿಕ್ಕಿ ನಿರುದ್ಯೋಗಿಗಳಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ 2.52 ಲಕ್ಷ ಹುದ್ದೆಗಳು ಖಾಲಿ ಇವೆ. ಸರ್ಕಾರಿ ಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ 53,700 ಹುದ್ದೆಗಳು ಭರ್ತಿಯಾಗಿಲ್ಲ. ಸಣ್ಣ ಕೈಗಾರಿಗಳು ಮುಚ್ಚಿದ್ದರಿಂದ 83,190 ಪುರುಷರು ಮತ್ತು ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ. ಈ ಸ್ಥಿತಿಯಲ್ಲಿ ಯಾವ ಮುಖ ಹೊತ್ತು ಯುವಜನೋತ್ಸವ ಉದ್ಘಾಟಿಸಲು ಪ್ರಧಾನಿ ಬರುತ್ತಿದ್ದಾರೆ? ಅವರು ಉದ್ಘಾಟಿಸುತ್ತಿರುವುದು ಯುವಜನೋತ್ಸವವೇ? ಯುವಜನ ವಿನಾಶೋತ್ಸವವೇ’ ಎಂದು ವ್ಯಂಗ್ಯವಾಡಿದ್ದಾರೆ.

‘ಪಿಎಸ್‌ಐ ನೇಮಕಾತಿ ಹಗರಣಕ್ಕೆ 1.29 ಲಕ್ಷ ಯುವಜನರು ಬಲಿಯಾಗಿದ್ದಾರೆ. ಎಇ ಮತ್ತು ಜೆಇ ಪರೀಕ್ಷೆಗಳ ಪ್ರತಿಯೊಬ್ಬ ಅಭ್ಯರ್ಥಿಗಳಿಂದಲೂ ₹ 50ಲಕ್ಷದಿಂದ ₹ 80 ಲಕ್ಷ ಸುಲಿಗೆ ಮಾಡಲಾಗಿದೆ. ರೈಲ್ವೆಯ ಭ್ರಷ್ಟ ಅಧಿಕಾರಿಗಳು ನೇಮಕಾತಿಯ ಸುಳ್ಳು ಭರವಸೆ ನೀಡಿ ₹ 22 ಕೋಟಿ ಲೂಟಿ ಮಾಡಿದ್ದಾರೆ. ನಿರುದ್ಯೋಗದಿಂದ ಬೇಸತ್ತು ರಾಜ್ಯದಲ್ಲಿ 1,129 ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ರೀತಿ ನಿರುದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ನಿರ್ಲಕ್ಷ್ಯದ ಮೂಲಕ ಯುವಜನರನ್ನು ವಿನಾಶದ ಅಂಚಿಗೆ ತಳ್ಳಿರುವ ಪ್ರಧಾನಿಗೆ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಲು ಯಾವ ನೈತಿಕತೆ ಇದೆ’ ಎಂದೂ ಪ್ರಶ್ನಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.