ಬೆಂಗಳೂರು /ಕಲಬುರ್ಗಿ: ರಾಜ್ಯದ ಮೈತ್ರಿ ಸರ್ಕಾರ ಪತನಗೊಳಿಸುವ ಯತ್ನ ಮುಂದುವರಿಸಿರುವ ಬಿಜೆಪಿ ನಾಯಕರು, ನಾಲ್ವರು ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸುವತ್ತ ಕಾರ್ಯಪ್ರವೃತ್ತರಾಗಿದ್ದಾರೆ.
ಬಿಜೆಪಿ ಜತೆ ನಿಕಟ ಬಾಂಧವ್ಯ ಹೊಂದಿದ್ದಾರೆ ಎನ್ನಲಾಗಿರುವ ಕಾಂಗ್ರೆಸ್ನ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಬಿ. ನಾಗೇಂದ್ರ ಹಾಗೂ ಉಮೇಶ ಜಾಧವ ಅವರು 10 ದಿನಗಳಿಂದ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.ತಮ್ಮ ‘ಒಗ್ಗಟ್ಟು’ ಪ್ರದರ್ಶಿಸಲು ಸಿದ್ದರಾಮಯ್ಯ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದ ಈ ನಾಲ್ವರಿಗೆ ಪಕ್ಷ ನೋಟಿಸ್ ನೀಡಿತ್ತು. ಅದಕ್ಕೆ ಯಾರೊಬ್ಬರೂ ಉತ್ತರ ನೀಡಿಲ್ಲ.
ಏತನ್ಮಧ್ಯೆ, ಸಿದ್ಧಗಂಗಾ ಶ್ರೀಗಳ ನಿಧನರಾಗಿದ್ದರಿಂದಾಗಿ ಬಿಜೆಪಿ, ಕಾಂಗ್ರೆಸ್ ನಾಯಕರು ಉದ್ದೇಶಿಸಿದ್ದ ‘ಆಪರೇಷನ್’ಗಳಿಗೆ ಕಡಿವಾಣ ಬಿದ್ದಿತ್ತು.
‘ಫೆಬ್ರುವರಿ 8ರಂದು ಬಜೆಟ್ ಮಂಡಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ತಯಾರಿ ನಡೆಸಿದ್ದಾರೆ. ಅದಕ್ಕೆ ಮುನ್ನವೇ ಕಾಂಗ್ರೆಸ್ ಶಾಸಕರ ರಾಜೀನಾಮೆ ಪರ್ವ ಆರಂಭಿಸಬೇಕು ಎಂಬುದು ಪಕ್ಷದ ನಾಯಕರ ಒತ್ತಾಸೆ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.
ಜಾಧವ ನಡೆ?: ಕಣ್ಮರೆಯಾಗಿದ್ದಉಮೇಶ ಜಾಧವ ಇದೇ 24ರಂದು ಕ್ಷೇತ್ರಕ್ಕೆ ಮರಳಲಿದ್ದಾರೆ.
ತಂದೆ ಗೋಪಾಲರಾವ ಜಾಧವ ಅವರ ಪುಣ್ಯಸ್ಮರಣೆ ಗುರುವಾರ ಕಾಳಗಿ ತಾಲ್ಲೂಕಿನ ಬೆಟಸೂರದಲ್ಲಿ ಜರುಗಲಿದೆ. ಸಿದ್ಧಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿಯನ್ನೂ ಸಲ್ಲಿಸಲಾಗುತ್ತದೆ. ಜಾಧವ ಅವರ ಶಕ್ತಿಪ್ರದರ್ಶನಕ್ಕೆ ಇದು ವೇದಿಕೆಯಾಗಲಿದ್ದು, ಅವರ ಮುಂದಿನ ನಡೆಯ ಬಗ್ಗೆ ಅನೌಪಚಾರಿಕ ಚರ್ಚೆ ನಡೆಯುವ ಸಂಭವ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.