ADVERTISEMENT

ಕಾಯ್ದೆ ತಿದ್ದುಪಡಿಗೆ ವಿರೋಧ: 10ರಿಂದ ಕಾಂಗ್ರೆಸ್‌ ಸಹಿ ಅಭಿಯಾನ

ಎಪಿಎಂಸಿ, ಕೃಷಿ, ಅವಶ್ಯಕ ವಸ್ತುಗಳ ಕಾಯ್ದೆ ತಿದ್ದುಪಡಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 3:06 IST
Last Updated 8 ಅಕ್ಟೋಬರ್ 2020, 3:06 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರ್ಗಿ: ‘ಕೇಂದ್ರ ಸರ್ಕಾರವು ಕೃಷಿ, ಎಪಿಎಂಸಿ ಮತ್ತು ಅವಶ್ಯಕ ವಸ್ತುಗಳ ಕಾಯ್ದೆಗೆ ಸಂಬಂಧಿಸಿದಂತೆ ಮಾಡಿರುವ ತಿದ್ದುಪಡಿ ರೈತರಿಗೆ ಹಾಗೂ ಕೃಷಿ ಕ್ಷೇತ್ರಕ್ಕೆ ಮಾರಕವಾಗಿದ್ದು, ಇದರ ವಿರುದ್ಧ ಕಾಂಗ್ರೆಸ್‌ ದೇಶದಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಸಲಿದೆ’ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದರು.

10 ಕೋಟಿ ಸಹಿ ಸಂಗ್ರಹಿಸುವ ಅಭಿಯಾನಕ್ಕೆ ಮಂಡ್ಯದಲ್ಲಿ ಅಕ್ಟೋಬರ್‌ 10ರಂದು ಚಾಲನೆ ನೀಡಲಾಗುವುದು ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಕಾಯ್ದೆಗಳಿಗೆ ಮಾಡಿರುವ ತಿದ್ದುಪಡಿಯಿಂದ ಆಗುವ ದುಷ್ಪರಿಣಾಮ ಮತ್ತು ತಲೆದೋರುವ ಸಂಕಷ್ಟದ ಬಗೆಗೆ ಅಭಿಯಾನದಲ್ಲಿ ಜನರಿಗೆ ತಿಳಿಸಲಾಗುವುದು. ಸಹಿಗಳ ಸಮೇತ ರಾಷ್ಟ್ರಪತಿಯವರಿಗೆ ನವೆಂಬರ್ 14ರಂದು ಮನವಿ ಸಲ್ಲಿಸಿ, ಕಾಯ್ದೆಗೆ ಹಾಕಿರುವ ಅಂಕಿತ ಹಿಂಪಡೆಯಲು ಕೋರಲಾಗುವುದು’ ಎಂದರು.

ADVERTISEMENT

‘ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ರೈತರ ಆದಾಯ ಪ್ರಮಾಣ ಹೆಚ್ಚಾಗಿತ್ತು. ಈಗ ಅದು ಕುಸಿದಿದೆ. ರೈತರ ಪ್ರತಿಭಟನೆಗಳೂ ಹೆಚ್ಚಾಗಿವೆ’ ಎಂದು ಹೇಳಿದರು.

‘ಎಪಿಎಂಸಿ ವ್ಯವಸ್ಥೆ ದುರ್ಬಲಗೊಳಿಸಿ ಖಾಸಗಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಕಾಂಗ್ರೆಸ್‌ ಜನಜಾಗೃತಿ ಅಭಿಯಾನದ ಜೊತೆಗೆ ಕಾನೂನಾತ್ಮಕ ಹೋರಾಟ ಕೂಡ ನಡೆಸಲಿದೆ’ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.