ಬೆಂಗಳೂರು:ಕಚೇರಿಯಲ್ಲಿ ಅಳವಡಿಸಿರುವ ಫ್ಲೆಕ್ಸ್ ತೆರವುಗೊಳಿಸಬೇಕು ಎಂದು ಬಿಬಿಎಂಪಿ ನೀಡಿರುವ ನೋಟಿಸ್ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್,ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ ಫ್ಲೆಕ್ಸ್ವರೆಗೂ ಬಂದಿದೆ ಎಂದು ಕಿಡಿಕಾರಿದೆ.
ನೋಟಿಸ್ ಪ್ರತಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್,'ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ ಫ್ಲೆಕ್ಸ್ವರೆಗೂ ಬಂದಿದೆ.ಖಾಸಗಿ ಜಾಗವಾದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಚೇರಿಯಲ್ಲಿ ಹಾಕಿದ ಫ್ಲೆಕ್ಸ್ ತೆರವುಗೊಳಿಸಲು ಸರ್ಕಾರ ಬಿಬಿಎಂಪಿ ಮೂಲಕ ಮುಂದಾಗಿದೆ. ಸಚಿವ ಮುನಿರತ್ನರ ಫ್ಲೆಕ್ಸ್ಗಳು ಹಾಗೂ ಬೆಂಗಳೂರಿನಾದ್ಯಂತ ಹಾಕಿರುವ ಬಿಜೆಪಿ ಧ್ವಜಗಳನ್ನು ತೆರವುಗೊಳಿಸಲು ಧೈರ್ಯವಿಲ್ಲವೇ?' ಎಂದು ಕೇಳಿದೆ.
'ಪ್ರಚಾರದ ಹುಚ್ಚು ನೆತ್ತಿಗೇರಿಸಿಕೊಂಡಿರುವ ಬಿಜೆಪಿ ತನ್ನ ಪ್ರಚಾರಕ್ಕಾಗಿ, ಮೋದಿಯ ಪ್ರಚಾರಕ್ಕೆ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ತಮ್ಮ ಪ್ರಚಾರದ ತೆವಲಿಗೆ ಸೇನೆಯ ಹಣವನ್ನೂ ಬಿಡದೆ ಬಳಸಿಕೊಂಡ ನೀಚರಿಗೆ ವಿರೋಧ ಪಕ್ಷಗಳು ತಮ್ಮ ಖಾಸಗಿ ಜಾಗದಲ್ಲಿ ಬ್ಯಾನರ್ ಹಾಕಿದರೂ ಕಣ್ಣುಕುಕ್ಕುತ್ತದೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ.
'ಕಾಂಗ್ರೆಸ್ ಪಕ್ಷ ತನ್ನ ಖಾಸಗಿ ಜಾಗವಾದ ಪದ್ಮನಾಭನಗರ ಕಚೇರಿ ಮೇಲೆ ಹಾಕಿಕೊಂಡಿರುವ ಬ್ಯಾನರ್ ತೆರವುಗೊಳಿಸಿ ಎಂದು ನೋಟಿಸ್ ನೀಡುವುದು ಬಿಟ್ಟು,ಸರ್ಕಾರಿ ಜಾಗಗಳಲ್ಲಿ, ರಸ್ತೆಗಳಲ್ಲಿ, ಕಂಡಕಂಡಲ್ಲಿ ಅನಧಿಕೃತವಾಗಿ ತಮ್ಮ ಪಕ್ಷದ ಬ್ಯಾನರ್ ಕಟ್ಟಿರುವ ಬಿಜೆಪಿಗರೇ ಮೊದಲು ಅವನ್ನು ಕಿತ್ತು ಮೂಲೆಗೆಸೆಯಿರಿ' ಎಂದು ತಿರುಗೇಟು ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.