ADVERTISEMENT

ಖಾಸಗಿ ಆಸ್ಪತ್ರೆಗಳ ಲಾಬಿಯಲ್ಲಿ ಸರ್ಕಾರವೂ ಶಾಮೀಲಾಗಿತ್ತೇ: ಕಾಂಗ್ರೆಸ್ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಅಕ್ಟೋಬರ್ 2021, 6:42 IST
Last Updated 26 ಅಕ್ಟೋಬರ್ 2021, 6:42 IST
ಕೋವಿಡ್ ಚಿಕಿತ್ಸೆ (ಸಾಂದರ್ಭಿಕ ಚಿತ್ರ)
ಕೋವಿಡ್ ಚಿಕಿತ್ಸೆ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಕೋವಿಡ್–19 ಸೋಂಕಿತರ ಚಿಕಿತ್ಸೆ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳ ಲಾಬಿಯಲ್ಲಿ ಸರ್ಕಾರವೂ ಶಾಮೀಲಾಗಿತ್ತೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ನಿಗದಿಗಿಂತ ಅಧಿಕ ಶುಲ್ಕ ವಿಧಿಸಿದ್ದನ್ನು ಸರ್ಕಾರ ಒಪ್ಪಿಕೊಂಡಿದೆ ಎಂಬ ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ಕೋವಿಡ್ ಸೋಂಕಿತರ ಹಿತ ಕಾಪಾಡುವಲ್ಲಿ ಆದ ವೈಫಲ್ಯವನ್ನು ಸರ್ಕಾರ ಒಪ್ಪಿದೆ. ಬೆಡ್, ಚಿಕಿತ್ಸೆ, ಆಕ್ಸಿಜನ್, ಔಷಧ ನೀಡುವಲ್ಲಿ ಸೋತಿದ್ದಲ್ಲದೆ, ಖಾಸಗಿ ಆಸ್ಪತ್ರೆಗಳ ಸುಲಿಗೆಯನ್ನೂ ನಿಯಂತ್ರಿಸದಿರುವುದು ಅವುಗಳ ಲಾಬಿಯೊಂದಿಗೆ ಸರ್ಕಾರವೂ ಶಾಮೀಲಾಗಿತ್ತೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಸಚಿವ ಸುಧಾಕರ್ ಅವರೇ ಉತ್ತರಿಸಿ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ರೈತರು ರೇಷ್ಮೆ ಜುಬ್ಬಾ ತೊಟ್ಟು, ರೇಷ್ಮೆ ರುಮಾಲು ಸುತ್ತಿಕೊಂಡು, ಬಾರುಕೋಲು ಹಿಡಿಯಬೇಕು ಎಂದು ಮುಖ್ಯಮಂತ್ರಿಗಳು ಭಾಷಣ ಮಾಡಿದ್ದಾರೆ. ಅದರೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದವರು ಮಾತಿಗೆ ತಪ್ಪಿ, ಕೊರೊನಾ ಸಂಕಷ್ಟದ ಸಮಯದಲ್ಲೂ ನೆರವಾಗಲಿಲ್ಲ. ಹೀಗಿರುವಾಗ ಅವರು ರೇಷ್ಮೆ ಬಟ್ಟೆ ಧರಿಸಲು ಹೇಗೆ ಸಾಧ್ಯ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಗೊಬ್ಬರದ ಬೆಲೆ ಗಗನಕ್ಕೇರಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ರಾಜ್ಯದಿಂದ ಆಯ್ಕೆಯಾದವರೇ ಕೇಂದ್ರ ರಸಗೊಬ್ಬರ ಸಚಿವರಾಗಿದ್ದರೂ ಪ್ರಯೋಜನವಾಗಿಲ್ಲ. ರೈತರು ಬಾರುಕೋಲು ಹಿಡಿಯುವುದಿರಲಿ, ಅದೇ ಬಾರುಕೋಲಿನಿಂದ ಸರ್ಕಾರ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ! ಆದರೂ ರೇಷ್ಮೆ ಜುಬ್ಬಾ ಹಾಕಬೇಕು ಎನ್ನುತ್ತಿದ್ದಾರೆ, ಇದೆಂತಹಾ ಕುಚೋದ್ಯ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.