ADVERTISEMENT

ಅತೃಪ್ತರ ಜತೆ ಬಿಎಸ್‌ವೈ ಆಪ್ತ ಕಾರ್ಯದರ್ಶಿಗೆ ಏನು ಕೆಲಸ: ಕಾಂಗ್ರೆಸ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 13:32 IST
Last Updated 9 ಜುಲೈ 2019, 13:32 IST
   

ಬೆಂಗಳೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರ ರಾಜೀನಾಮೆ ಪ್ರಹಸನದಲ್ಲಿನಮ್ಮ ಪಾತ್ರವಿಲ್ಲ ಎಂದು ಹೇಳಿರುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್‌ ಹಲವು ಪ್ರಶ್ನೆಗಳನ್ನು ಕೇಳಿದೆ. ಅಲ್ಲದೆ,ಆಪರೇಷನ್‌ ಕಮಲಕ್ಕೆ ಸಾಕ್ಷ್ಯವನ್ನೂ ಒದಗಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ಅತೃಪ್ತ ಶಾಸಕರ ಜತೆಗೆ ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಇರುವುದು ಯಾಕೆ ಎಂದು ಫೋಟೋ ಸಹಿತ ಪ್ರಶ್ನೆ ಕೇಳಿದೆ.

ಕಳೆದ ಶನಿವಾರ ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 13 ಶಾಸಕರ ಪೈಕಿ 11 ಮಂದಿ ಮುಂಬೈ ವಿಶೇಷ ವಿಮಾನದ ಮೂಲಕ ಮುಂಬೈಗೆ ತೆರಳಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಮುಂದೆ ನಿಂತು ಎಲ್ಲ ವ್ಯವಸ್ಥೆಗಳನ್ನೂ ಮಾಡುತ್ತಿದ್ದ ದೃಶ್ಯಗಳು, ಫೊಟೊಗಳನ್ನು ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ, ಪಕ್ಷೇತರ ಶಾಸಕ ನಾಗೇಶ್‌ ಅವರು ಮುಂಬೈಗೆ ತೆರಳುವಾಗಲೂ ಬಿಎಸ್‌ವೈ ಆಪ್ತ ಕಾರ್ಯದರ್ಶಿ ಅವರ ಜತೆಗೇ ಇದ್ದರು. ಅದೇ ಫೊಟೊಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಕಾಂಗ್ರೆಸ್‌ ಬಿಜೆಪಿ ವಿರುದ್ಧ ಕಿಡಿ ಕಾರಿದೆ. ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದೆ.

ADVERTISEMENT

ಇದರ ಜತೆಗೆ ಇನ್ನೂ ಹಲವು ಪ್ರಶ್ನೆಗಳನ್ನು ಕಾಂಗ್ರೆಸ್‌ ಕೇಳಿದೆ.

‘ರಾಜನಾಥ್‌ ಸಿಂಗ್‌, ಅಮಿತ್‌ ಶಾ, ನರೇಂದ್ರ ಮೋದಿ ದೇಶದ ಜನರ ಎದುರು ಸತ್ಯ ಬಹಿರಂಗಪಡಿಸಬೇಕು. ಶಾಸಕರನ್ನು ಖರೀದಿಸಲು ಎಷ್ಟು ಹಣ ನೀಡುತ್ತಿದ್ದೀರಿ. ಶಾಸಕರ ಪ್ರಯಾಣಕ್ಕೆ ವಿಮಾನ, ತಂಗಲು ಹೋಟೆಲ್‌ ವ್ಯವಸ್ಥೆ ಮಾಡಿದ್ದು ಯಾರು? ಶಾಸಕರ ಜತೆ ಯಡಿಯೂರಪ್ಪ ಆಪ್ತ ಕಾರ್ಯದರ್ಶಿ ಇರುವುದು ಏಕೆ? ಶಾಸಕರು ಇರುವ ಹೋಟೆಲ್‌ಗೆ ಮಹಾರಾಷ್ಟ್ರದ ಬಿಜೆಪಿ ನಾಯಕರು ಭೇಟಿ ನೀಡುತ್ತಿರುವುದುಏಕೆ? ಬಿಜೆಪಿಯ ವಂಚಕತನ ಈ ಮೂಲಕ ಬಹಿರಂಗವಾಗಿದೆ,’ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.