ADVERTISEMENT

ಕಂಪ್ಲಿ ಶಾಸಕ ಗಣೇಶ್‌ ಅಮಾನತು ಹಿಂಪಡೆದ ಕಾಂಗ್ರೆಸ್‌ 

​ಪ್ರಜಾವಾಣಿ ವಾರ್ತೆ
Published 29 ಮೇ 2019, 15:17 IST
Last Updated 29 ಮೇ 2019, 15:17 IST
   

ಬೆಂಗಳೂರು: ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ್‌ಗೆ ವಿಧಿಸಲಾಗಿದ್ದ ಅಮಾನತನ್ನು ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಕಾಂಗ್ರೆಸ್‌ ಬುಧವಾರ ಹಿಂಪಡೆದಿದೆ.

ಎಐಸಿಸಿ ರಾಜ್ಯ ಉಸ್ತುವಾರಿಕೆ.ಸಿ ವೇಣುಗೋಪಾಲ್‌, ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದದಿನೇಶ್‌ ಗುಂಡೂರಾವ್‌ ಅವರು ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್‌ ತಿಳಿಸಿದೆ.

ಸದ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲು ಅನುಭವಿಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ನಡೆಸುತ್ತಿದೆ. ಅದರ ಭಾಗವಾಗಿ ಬುಧವಾರ ಗಣೇಶ್‌ ವಿರುದ್ಧದ ಅಮಾನತು ಹಿಂಪಡೆಯಲಾಗಿದೆ.

ADVERTISEMENT

ಕೆಲ ತಿಂಗಳ ಹಿಂದೆ ಬಿಡದಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಅನೌಪಚಾರಿಕ ಶಾಸಕಾಂಗ ಸಭೆ ನಡೆದಿತ್ತು. ಈ ವೇಳೆ ಶಾಸಕ ಆನಂದ್‌ ಸಿಂಗ್‌ ಮತ್ತು ಗಣೇಶ್‌ ನಡುವೆ ಹೊಡೆದಾಟ ಸಂಭವಿಸಿತ್ತು. ಈ ಘಟನೆ ಕಾಂಗ್ರೆಸ್‌ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದ ಹಿನ್ನೆಲೆಯಲ್ಲಿ ಗಣೇಶ್‌ ಅವರನ್ನು ಪಕ್ಷ ಅಮಾನತು ಮಾಡಿತ್ತು. ಅಲ್ಲದೆ, ಆಂತರಿಕ ವಿಚಾರಣೆಯನ್ನೂ ನಡೆಸಿತ್ತು. ನಂತರದಲ್ಲಿ ಗಣೇಶ್‌ ಬಂಧನ, ಸೆರೆವಾಸ, ಬಿಡುಗಡೆಯಂಥ ಬೆಳವಣಿಗೆಗಳೂ ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.