ಬೆಂಗಳೂರು: ವಿಸ್ಟ್ರಾನ್ ದಾಂದಲೆಯ ಹಿಂದೆ ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಕಾರ್ಮಿಕರ ಹಿತವನ್ನು ಕಾಯಲು ಸಾಕಷ್ಟು ಕಾಯ್ದೆಗಳಿವೆ. ವೇತನ ಸಮಸ್ಯೆ ಇದ್ದರೆ ಸರ್ಕಾರಕ್ಕೆ ದೂರು ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು, ಆದರೆ ವ್ಯವಸ್ಥಿತವಾಗಿ ಹಿಂಸಾಚಾರ ನಡೆಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಪೂರ್ವ ಯೋಜಿತ ಮತ್ತು ದಿಢೀರ್ ಹೋರಾಟಗಳ ಸ್ವರೂಪದ ಬಗ್ಗೆ ಸ್ಪಷ್ಟವಾದ ಅರಿವಿದೆ. ಇಲ್ಲಿ ವಿಧ್ವಂಸಕ ಕೃತ್ಯದ ರೀತಿಯಲ್ಲಿ ಗಲಾಟೆ ನಡೆದಿದೆ, ಇದರಿಂದ ಜಾಗತಿಕವಾಗಿ ರಾಜ್ಯ ಮತ್ತು ದೇಶದ ಬಗ್ಗೆ ತಪ್ಪು ಸಂದೇಶ ಹೋಗಿದೆ’ ಎಂದು ಹೇಳಿದರು.
ಗಲಾಟೆಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದ್ದು, ಶೀಘ್ರವೇ ಸತ್ಯಾಂಶ ಹೊರಗೆ ಬರಲಿದೆ. ಕಾರ್ಮಿಕರಿಗೆ ಕೊಡಬೇಕಾದ ವೇತನ ಮತ್ತು ಇತರ ಸೌಲಭ್ಯಗಳನ್ನು ಸಕಾಲದಲ್ಲಿ ಪಾವತಿಸಬೇಕು. ಆಡಳಿತ ಮಂಡಳಿ ಈಗಾಗಲೇ ಆ ಬಗ್ಗೆ ಕ್ರಮ ತೆಗೆದುಕೊಂಡಿದೆ ಎಂಬ ಮಾಹಿತಿ ಇದೆ ಎಂದು ರವಿ ತಿಳಿಸಿದರು.
ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಪ್ರಮಾಣಿಕ ಪ್ರಯತ್ನ ನಡೆಸಿದೆ ಎಂದು ಹೇಳಿದರು.
ಮೂರು ಕೃಷಿ ಸುಧಾರಣಾ ಕಾಯ್ದೆಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಲಹೆ ನೀಡುವುದಕ್ಕೆ ಮೊದಲೇ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಎಪಿಎಂಸಿ ಹೊರಗೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಶುಲ್ಕವಿಧಿಸಲು ಕೇಂದ್ರ ಒಪ್ಪಿಕೊಂಡಿದೆ. ಎಪಿಎಂಸಿಮುಚ್ಚುವುದಿಲ್ಲ ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಮುಂದುವರಿಸಲು ಬದ್ಧರಾಗಿದ್ದೇವೆ ಎಂದು ರವಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.