ADVERTISEMENT

ಕಲುಷಿತ ನೀರು: ಸಾಂಕ್ರಾಮಿಕ ರೋಗದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 16:04 IST
Last Updated 1 ಏಪ್ರಿಲ್ 2022, 16:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕುಡಿಯುವ ನೀರಿನಿಂದ ಕಾಲರಾ, ಕರುಳುಬೇನೆ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋ‌ಗಗಳು ಈ ಅವಧಿಯಲ್ಲಿ ಹೆಚ್ಚಾಗಿ ಹರಡುತ್ತವೆ. ಸಾಲು ಸಾಲು ಹಬ್ಬಗಳು ಹಾಗೂ ಜಾತ್ರೆಗಳು ನಡೆಯುವುದರಿಂದ ಸಾಂಕ್ರಾಮಿಕ ರೋಗಗಳ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದುಆರೋಗ್ಯ ಇಲಾಖೆ ಸೂಚಿಸಿದೆ.

ಈ ಬಗ್ಗೆ ಇಲಾಖೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ. ಕಳೆದ ವರ್ಷ 1,35,935 ಕರುಳುಬೇನೆ ಪ್ರಕರಣಗಳು, 47,137 ವಿಷಮಶೀತ ಜ್ವರ ಪ್ರಕರಣಗಳು ಹಾಗೂ 3,917 ಯಕೃತ್ತಿನ ಉರಿಯೂತ (ಹೆಪಟೈಟಿಸ್) ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದವು. ಬೇಸಿಗೆಯಲ್ಲಿ ವಾಂತಿ ಭೇದಿ, ಕಾಮಾಲೆ, ಕರುಳುಬೇನೆ, ಇಲಿಜ್ವರ ಒಳಗೊಂಡಂತೆ ವಿವಿಧಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಹೀಗಾಗಿ, ರೋಗಗಳ ಹರಡುವಿಕೆ ತಡೆಗೆ ಕುಡಿಯುವ ನೀರು ಪರಿಶೀಲನೆ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

‘ಜಿಲ್ಲೆಗಳಲ್ಲಿ ನಡೆಯುವ ಎಲ್ಲ ಜಾತ್ರಾ ಮಹೋತ್ಸವಗಳ ವಿವರವನ್ನು ಸಂಗ್ರಹಿಸಿ, ಅಗತ್ಯ ಸಿಬ್ಬಂದಿ ನಿಯೋಜಿಸಬೇಕು. ಕುಡಿಯುವ ನೀರಿನ ಮೂಲಗಳ ಮಾಹಿತಿ ಕಲೆಹಾಕಿ, ಎಲ್ಲ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಬೇಕು. ನೀರು ಕುಡಿಯಲು ಯೋಗ್ಯವಿರದಿದ್ದರೆನೀರಿನ ಮೂಲಗಳಿಗೆ ಕ್ಲೋರಿನೇಷನ್‌ ಮಾಡಬೇಕು. ಹಬ್ಬ–ಜಾತ್ರೆಗಳು ನಡೆಯುವ ಪ್ರದೇಶದಲ್ಲಿನ ಎಲ್ಲ ಆಹಾರ ಅಂಗಡಿಗಳನ್ನು ಸಂಬಂಧಪಟ್ಟ ಆಹಾರ ಪರಿವೀಕ್ಷಕರು ಪರಿಶೀಲನೆ ನಡೆಸಿ, ತೆರೆದ ಆಹಾರ ಮಾರಾಟ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಹೇಳಲಾಗಿದೆ.

ADVERTISEMENT

‘ಹೋಟೆಲ್ ಮತ್ತು ಅಂಗಡಿಗಳ ತಪಾಸಣೆ ನಡೆಸಿ, ಆಹಾರ ಮತ್ತು ನೀರಿನ ಗುಣಮಟ್ಟ ಸುರಕ್ಷತೆ ಬಗ್ಗೆ ಗಮನಹರಿಸಬೇಕು. ತುರ್ತು ಸಂದರ್ಭದಲ್ಲಿ ಬಿಸಿ ನೀರು ಸರಬರಾಜು ಮಾಡಲು ಹೋಟೆಲ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಸೂಕ್ತ ಚಿಕಿತ್ಸೆಗಾಗಿ ಅಗತ್ಯವಾದ ಜೀವ ರಕ್ಷಕ ಔಷಧಗಳು ಹಾಗೂ ಕ್ರಿಮಿ–ಕೀಟನಾಶಕಗಳನ್ನು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಸೂತ್ತೋಲೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.