ತಿಪಟೂರು: ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕವನ್ನು ತಕ್ಷಣವೇ ಹಿಂಪಡೆದು ಹಳೆಯ ಪಠ್ಯವನ್ನೇ ಮುಂದುವರಿಸಬೇಕು ಎಂಬ ಒಕ್ಕೊರಲ ಕೂಗು ‘ತಿಪಟೂರು ಚಲೊ’ ಸಮಾವೇಶದಲ್ಲಿ ಭಾನುವಾರಪ್ರತಿಧ್ವನಿಸಿತು.
ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಜಾಗೃತ ತಿಪಟೂರು, ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಏರ್ಪಡಿಸಿದ್ದ ಸಮಾ
ವೇಶದಲ್ಲಿ ಚಿಂತಕರು, ಸಾಹಿತಿಗಳು, ಲೇಖಕರು, ವಿವಿಧ ಮಠದ ಸ್ವಾಮೀಜಿಗಳು ಈ ಹಕ್ಕೊತ್ತಾಯ ಮಂಡಿಸಿದರು.
ಪಠ್ಯ ಪರಿಷ್ಕರಣೆ ವಿರೋಧಿಸಿ ಜನರಲ್ಲಿ ಜಾಗೃತಿ ಮೂಡಿಸಲು ಜಾಗೃತ ತಿಪಟೂರು ವತಿಯಿಂದ ತಾಲ್ಲೂಕಿನಾದ್ಯಂತ ಹಮ್ಮಿಕೊಂಡಿದ್ದ ಪಾದಯಾತ್ರೆಯ ಸಮಾರೋಪದ ಅಂಗವಾಗಿ ಮೆರವಣಿಗೆ ಮತ್ತು ಈ ಸಮಾವೇಶ ಏರ್ಪಡಿಸಲಾಗಿತ್ತು.
ಹಿರಿಯೂರಿನ ಕೋಡಿಹಳ್ಳಿ ಆದಿಜಾಂಬವ ಮಠದ ಷಡಕ್ಷರ ಮುನಿ ಸ್ವಾಮೀಜಿ ಮಾತನಾಡಿ, ‘ರಾಜ್ಯ ಸರ್ಕಾರ ಪಠ್ಯಪುಸ್ತಕ ವಿಚಾರದಲ್ಲಿ ಅಕ್ಷರಗಳಿಗೆ ಬಣ್ಣ ಬಳಿಯುವ ನಿರ್ಧಾರವನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.
ಸರ್ಕಾರದ ಕ್ರಮಗಳನ್ನಷ್ಟೇ ನಾವು ವಿರೋಧಿಸುತ್ತಿದ್ದೇವೆ. ಯಾವುದೇ ಜಾತಿ, ಜನಾಂಗ, ವ್ಯಕ್ತಿಯನ್ನಲ್ಲ. ಪರಿಷ್ಕರಣೆ ಸಮಿತಿ ಮಾಡಿರುವ ತಪ್ಪು ತಿದ್ದುವ ಕೆಲಸ ಮಾಡಬೇಕಿದ್ದ ಶಿಕ್ಷಣ ಸಚಿವರು ಮೌನವಹಿಸಿ ಬೆಂಬಲ ನೀಡುತ್ತಿರುವುದು ಸರಿಯಲ್ಲ. ಇದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಚಿಂತಕ ಕೋಟಿಗಾನಹಳ್ಳಿ ರಾಮಯ್ಯ, ‘ಆರ್ಎಸ್ಎಸ್ ಎಂದಿಗೂ ಸಮಾನತೆ ಒಪ್ಪುವುದಿಲ್ಲ. ಅವರಿಗೆ ಬುದ್ಧ ಶಾಂತವಾಗಿರುವುದು ಬೇಕಿಲ್ಲ. ಇದೊಂದು ದೇಶದ್ರೋಹಿ ಸಂಘಟನೆ. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ತಪ್ಪಾಗಿದೆ ಎಂದು ಅವರೇ ಒಪ್ಪಿಕೊಂಡಿರುವ ನಂತರ ಅದನ್ನು ಯಾಕೆ ಹಿಂಪಡೆಯುತ್ತಿಲ್ಲ’ ಎಂದು ಪ್ರಶ್ನಿಸಿದರು.
ಕುಣಿಗಲ್ ತಾಲ್ಲೂಕಿನ ಅರೇಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ, ತುರುವೇಕರೆ ತಾಲ್ಲೂಕಿನ ಡಿ. ಕಲ್ಕೆರೆಯ ಅಲ್ಲಮಪ್ರಭು ಮಠದ ತಿಪ್ಪೇರುದ್ರ ಸ್ವಾಮೀಜಿ, ಸಾಹಿತಿ ಎಲ್.ಎನ್. ಮುಕುಂದರಾಜ್, ಚಿಂತಕ ಜಿ.ಎಸ್. ನಾಗರಾಜ್, ರಾಜ್ಯ ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್, ಜಾಗೃತ ತಿಪಟೂರು ಅಧ್ಯಕ್ಷ ಸಿ.ಬಿ. ಶಶಿಧರ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.