ADVERTISEMENT

ಕೋವಿಡ್‌ನಿಂದ ರಾಜ್ಯದಲ್ಲಿ ಒಂದೇ ದಿನ 12,545 ಮಂದಿ ಗುಣಮುಖ

7 ಸಾವಿರದ ಗಡಿ ದಾಟಿದ ಕೊರೊನಾ ಸೋಂಕಿತ ಮೃತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 15:40 IST
Last Updated 11 ಸೆಪ್ಟೆಂಬರ್ 2020, 15:40 IST
ಕೋವಿಡ್‌ ಪರೀಕ್ಷೆಗಾಗಿ ಮೈಸೂರಿನ ಪುರಭವನದಲ್ಲಿ ಸಾರ್ವಜನಿಕರು ಗಂಟಲು ದ್ರವ ನೀಡಿದರು
ಕೋವಿಡ್‌ ಪರೀಕ್ಷೆಗಾಗಿ ಮೈಸೂರಿನ ಪುರಭವನದಲ್ಲಿ ಸಾರ್ವಜನಿಕರು ಗಂಟಲು ದ್ರವ ನೀಡಿದರು   

ಬೆಂಗಳೂರು: ಕೊರೊನಾ ಸೋಂಕಿತರಲ್ಲಿ 12,545 ಮಂದಿಗೆ ಕಾಯಿಲೆ ವಾಸಿಯಾಗಿರುವುದು ಶುಕ್ರವಾರ ದೃಢಪಟ್ಟಿದೆ. 24 ಗಂಟೆಗಳ ಅವಧಿಯಲ್ಲಿ ಚೇತರಿಸಿಕೊಂಡವರ ಗರಿಷ್ಠ ಸಂಖ್ಯೆ ಇದಾಗಿದೆ. ರಾಜ್ಯದಲ್ಲಿ ಈವರೆಗೆ ಗುಣಮುಖರಾದವರ ಸಂಖ್ಯೆ 3.34 ಲಕ್ಷಕ್ಕೆ ಏರಿಕೆಯಾಗಿದೆ.

ಕೋವಿಡ್ ಪೀಡಿತರಲ್ಲಿ ಮತ್ತೆ 130 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಇದರಿಂದಾಗಿ ಸೋಂಕಿಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 7 ಸಾವಿರದ ಗಡಿ (7,067) ದಾಟಿದೆ. ಈ ತಿಂಗಳ 11 ದಿನಗಳಲ್ಲಿ 1,365 ಮಂದಿ ಮೃತಪಟ್ಟಿರುವುದು ಖಚಿತಪಟ್ಟಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 124 ಮಂದಿ ಸಾವಿಗೀಡಾಗಿದ್ದಾರೆ. ಪರಿಣಾಮ ಮೊದಲ ಪ್ರಕರಣ ವರದಿಯಾಗಿ ಆರು ತಿಂಗಳು ಕಳೆಯುವ ವೇಳೆಗೆ ಮೃತರ ಸಂಖ್ಯೆ 7 ಸಾವಿರಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಹೊಸದಾಗಿ 9,464 ಮಂದಿ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 4.40 ಲಕ್ಷಕ್ಕೆ ಏರಿಕೆಯಾಗಿದೆ. ಈ ತಿಂಗಳಲ್ಲಿ 97,998 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದ್ದು, ಪ್ರತಿನಿತ್ಯ ಸರಾಸರಿ 8,908 ಮಂದಿ ಕೋವಿಡ್‌ ಪೀಡಿತರಾಗಿದ್ದಾರೆ. ಹೀಗಾಗಿ ಸೋಂಕು ದೃಢ ಪ್ರಮಾಣ ಶೇ 12.02ಕ್ಕೆ ಏರಿಕೆಯಾಗಿದೆ. ಒಂದೇ ದಿನ 64,669 ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ADVERTISEMENT

ಬಳ್ಳಾರಿಯಲ್ಲಿ 25 ಸಾವಿರ:ಬೆಂಗಳೂರಿನಲ್ಲಿ ಹೊಸದಾಗಿ 3,426 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1.63 ಲಕ್ಷ ದಾಟಿದೆ. ಮೈಸೂರಿನಲ್ಲಿ ಮತ್ತೆ 676 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 24 ಸಾವಿರ ದಾಟಿದೆ. ಬಳ್ಳಾರಿಯಲ್ಲಿ ಹೊಸದಾಗಿ 382 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25 ಸಾವಿರ ದಾಟಿದೆ. ದಕ್ಷಿಣ ಕನ್ನಡ (446), ತುಮಕೂರು (395), ಶಿವಮೊಗ್ಗ (349), ಹಾಸನ (305) ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ಹೊಸದಾಗಿ ವರದಿಯಾಗಿವೆ.

ದೇಶದಲ್ಲಿ ಅತಿ ಹೆಚ್ಚು ಸೋಂಕಿತರು ಹಾಗೂ ಗುಣಮುಖರನ್ನು ಒಳಗೊಂಡಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಅಧಿಕ ಮರಣ ಪ್ರಕರಣಗಳು ವರದಿಯಾಗಿರುವ ರಾಜ್ಯಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.