ಹೊಸಪೇಟೆ: ‘ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಜನ ಗುಂಪಾಗಿ ಸೇರಬಾರದು ಎಂದು ಸರ್ಕಾರ ತಿಳಿಸಿರುವುದರಿಂದ ಇಲ್ಲಿನ ನೆಹರೂ ಕಾಲೊನಿಯ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಾ. 26ರಂದು ನಡೆಯಬೇಕಿದ್ದ ರಥೋತ್ಸವವನ್ನು ರದ್ದುಗೊಳಿಸಲಾಗಿದೆ’ ಎಂದು ದೇಗುಲ ಸಮಿತಿಯ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ತಿಳಿಸಿದರು.
‘₹30 ಲಕ್ಷ ವೆಚ್ಚದಲ್ಲಿ ನೂತನ ರಥ ನಿರ್ಮಿಸಲಾಗಿದೆ. ಆದರೆ, ಮೊದಲ ವರ್ಷವೇ ಅದನ್ನು ಎಳೆಯಲಾಗುತ್ತಿಲ್ಲ ಎಂಬ ನೋವು ನಮಗೂ ಇದೆ. ಆದರೆ, ಇದು ಆಕಸ್ಮಿಕವಾಗಿ ಸೃಷ್ಟಿಯಾಗಿರುವ ಬಿಕ್ಕಟ್ಟು. ಸರ್ಕಾರ ಕೂಡ ಜನರ ಹಿತದೃಷ್ಟಿಯಿಂದ ಜನ ಸೇರದಂತೆ ತಿಳಿಸಿದೆ. ಅದನ್ನು ಪ್ರತಿಯೊಬ್ಬರೂ ಪಾಲಿಸಬೇಕಾದುದು ಕಡ್ಡಾಯ. ಎಲ್ಲಕ್ಕಿಂತ ಜನರ ಜೀವ ಮುಖ್ಯ ಎನ್ನುವುದು ಯಾರು ಕೂಡ ಮರೆಯಬಾರದು’ ಎಂದು ಶುಕ್ರವಾರ ದೇವಸ್ಥಾನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಮಾ. 25ರಂದು ನಡೆಯಬೇಕಿದ್ದ ಅಗ್ನಿಕುಂಗ, ಮಾ. 26ರ ತೇರು, ಮಾ. 27ರ ಕಡುಬಿನ ಕಾಳಗವೂ ರದ್ದುಪಡಿಸಲಾಗಿದೆ. ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜಾ ಕಾರ್ಯಗಳು ನಡೆಯುತ್ತವೆ. ಸಾರ್ವಜನಿಕರು ಅಭಿಷೇಕ ಮಾಡುವಂತಿಲ್ಲ. ತೀರ್ಥ, ಪ್ರಸಾದ ಕೂಡ ಇರುವುದಿಲ್ಲ. ಭಕ್ತರು ಮನೆಗಳಲ್ಲಿ ವೀರಭದ್ರೇಶ್ವರನಿಗೆ ಆ ದಿನ ಪೂಜೆ ನೆರವೇರಿಸಬೇಕು. ಮುಂದಿನ ವರ್ಷ ಅದ್ದೂರಿಯಾಗಿ ರಥೋತ್ಸವ ಆಯೋಜಿಸೋಣ. ಹಾಗಾಗಿ ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು.
ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಅಶ್ವಿನಿ ಕೋತಂಬ್ರಿ, ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಎಚ್. ಶರಣು ಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ಮುಖಂಡರಾದ ಗೊಗ್ಗ ಗುರುಬಸವರಾಜ, ಕೆ.ಕೊಟ್ರೇಶ, ಗಂಗಾಧರ, ನಿಂಗಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.