ಬೆಂಗಳೂರು: ಕೊರೊನಾ ಲಾಕ್ಡೌನ್ ಬಳಿಕ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಕೇಳುವವರೇ ಇಲ್ಲವಾಗಿದೆ.ಹೊಟ್ಟೆಬಟ್ಟೆಗೂ ಅಕ್ಷರಶಃ ‘ಲಾಕ್’ ಬಿದ್ದುಬಿಟ್ಟಿದೆ ಎಂಬ ಅಳಲು ಉಪನ್ಯಾಸಕರದ್ದಾಗಿದೆ.
‘ಮಾರ್ಚ್ ತಿಂಗಳಿಂದ ನಮಗೆ ಗೌರವಧನ ಸಿಕ್ಕಿಯೇ ಇಲ್ಲ. ಕಾಲೇಜುಗಳು ಮತ್ತೆ ಯಾವಾಗ ಆರಂಭವಾಗುತ್ತವೆ ಎಂಬುದೂ ಗೊತ್ತಿಲ್ಲ. ಈಗಾಗಲೇ ರಾಜ್ಯದಲ್ಲಿ ಎಂಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಕುಟುಂಬಗಳಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುವಂತಾಗಿದೆ. ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳದೆ ನಮ್ಮ ಜೀವನವೇ ಅತಂತ್ರವಾಗಿದೆ’ ಎಂದು ಹಲವಾರು ಅತಿಥಿ ಉಪನ್ಯಾಸಕರು ಗೋಳು ಹೇಳಿಕೊಂಡಿದ್ದಾರೆ.
‘ನಾನು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವ. ಹೊಟ್ಟೆಗೆ ಏನೂ ಇಲ್ಲದ ಕಾರಣ ಉದ್ಯೋಗ ಖಾತರಿ ಯೋಜನೆಯಡಿ ಬದು ನಿರ್ಮಾಣ ಕೆಲಸಕ್ಕೆ ಹೋಗುತ್ತಿದ್ದೇನೆ. ಉನ್ನತ ವ್ಯಾಸಂಗ ಮಾಡಿದವರಿಗೆ ಇಂತಹ ದುರ್ಗತಿ ಬರಬಾರದು’ ಎಂದು ಕೊಪ್ಪಳದ ಉಪನ್ಯಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಶ್ಚಿಮ ಬಂಗಾಳದಲ್ಲಿ ಅತಿಥಿ ಉಪನ್ಯಾಸಕರಿಗೆ ಅತ್ಯುತ್ತಮ ಕೊಡುಗೆ ನೀಡುವ ಯೋಜನೆ ರೂಪಿಸಿದ್ದಾರೆ. ನೆಟ್, ಪಿಎಚ್.ಡಿ. ಆದ ಉಪನ್ಯಾಸಕರಿಗೆ ತಿಂಗಳಿಗೆ ₹ 35 ಸಾವಿರ ಗೌರವಧನ, ₹ 5 ಲಕ್ಷದವರೆಗೆ ಗುಂಪು ವಿಮಾ ಸೌಲಭ್ಯ, ನೇಮಕಾತಿಯಲ್ಲಿ ಮೀಸಲಾತಿ ಸಹಿತ ಹಲವು ಸೌಲಭ್ಯ ಕಲ್ಪಿಸಿದ್ದಾರೆ. ರಾಜ್ಯ ಸರ್ಕಾರ ಅದನ್ನು ಅನುಸರಿಸಬೇಕು’ ಎಂದು ಶಿವಮೊಗ್ಗದ ಅತಿಥಿ ಉಪನ್ಯಾಸಕ ಆರ್.ಬಿ.ಅರುಣ್ ಕುಮಾರ್ ಆಗ್ರಹಿಸಿದರು.
*
ಡಿಸೆಂಬರ್ನಿಂದ ಫೆಬ್ರುವರಿ ತನಕದ ಗೌರವಧನ ₹ 53 ಕೋಟಿ. ಅದು ಸಿಕ್ಕಿದೆ. ಮಾರ್ಚ್ನಿಂದ ಇಲ್ಲಿಯವರೆಗೆ ನಯಾ ಪೈಸೆ ಸಿಕ್ಕಿಲ್ಲ.
-ಶಿವಕುಮಾರ್ ಯರಗಟ್ಟಿಹಳ್ಳಿ, ಚನ್ನಗಿರಿಯ ಅತಿಥಿ ಉಪನ್ಯಾಸಕ
*
ಲಾಕ್ಡೌನ್ ಅವಧಿಯಿಂದ ಈಚೆಗೆ ಗೌರವಧನ ಇಲ್ಲ. ರಾಜ್ಯದಲ್ಲಿ ಈಗಾಗಲೇ 8 ಮಂದಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.-ಆರ್.ಬಿ.ಅರುಣ್ಕುಮಾರ್, ಶಿವಮೊಗ್ಗದ ಅತಿಥಿ ಉಪನ್ಯಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.