ADVERTISEMENT

ರಾಜ್ಯದಲ್ಲಿ ಕೊರೊನಾ ಸೋಂಕಿತರಿಗಿಂತ ಗುಣಮುಖರೇ ಹೆಚ್ಚು

ಹೊಸದಾಗಿ 5,851 ಜನರಿಗೆ ಸೋಂಕು * 8,061 ಗುಣಮುಖ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 20:11 IST
Last Updated 24 ಆಗಸ್ಟ್ 2020, 20:11 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಕೊರೊನಾ ಸೋಂಕು ದೃಢಪಟ್ಟವರಿಗಿಂತ, ಗುಣಮುಖರಾದವರ ಸಂಖ್ಯೆ ಸುಮಾರು 2,500ಕ್ಕೂ ಹೆಚ್ಚು.

ಒಂದೇ ದಿನ 5,851 ಜನರಿಗೆ ಸೋಂಕು ದೃಢಪಟ್ಟಿದ್ದರೆ, 8,061 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.ಇದರೊಂದಿಗೆ ಒಟ್ಟಾರೆ ಸೋಂಕಿನಿಂದ ಮುಕ್ತರಾದವರ ಸಂಖ್ಯೆ ಎರಡು ಲಕ್ಷದ ಗಡಿ (1,97,625) ಸಮೀಪಿಸಿದೆ.

ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,83,665ಕ್ಕೆ ಏರಿದ್ದರೆ, 24ರಂದು 130 ಜನ ಸಾವಿಗೀಡಾಗುವುದರೊಂದಿಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 4,810ಕ್ಕೆ ಏರಿದೆ.ಸದ್ಯ 81,211 ಸೋಂಕಿತರು ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 768 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಹೊಸದಾಗಿ, 39,817 ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದ್ದು, ಈವರೆಗೆ ಒಟ್ಟು 24,53,768 ಮಂದಿ ಈ ಪರೀಕ್ಷೆಗೆ ಒಳಗಾಗಿದ್ದಾರೆ.

ಎಲ್ಲೆಲ್ಲಿ? ಎಷ್ಟು ಪ್ರಕರಣಗಳು?

ಬೆಂಗಳೂರಿನಲ್ಲಿ ಅತಿ ಹೆಚ್ಚು (1,918) ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಬಳ್ಳಾರಿ (306) , ಬೆಳಗಾವಿಯಲ್ಲಿ (319) ಸೋಂಕಿತರ ಸಂಖ್ಯೆ ತ್ರಿಶತಕದ ಗಡಿ ದಾಟಿದೆ.ಕೊಪ್ಪಳ (271), ಧಾರವಾಡ (221),ಶಿವಮೊಗ್ಗ (220), ದಕ್ಷಿಣ ಕನ್ನಡ (201), ಹಾಸನ (200) ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಆ. 24ರಂದು 26 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.