ADVERTISEMENT

ಕೊರೊನಾ ಭೀತಿ: ಜನಶತಾಬ್ದಿ ಸೇರಿದಂತೆ ಹಲವು ರೈಲುಗಳ ಸಂಚಾರ ನಾಳೆಯಿಂದ ರದ್ದು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 14:13 IST
Last Updated 19 ಮಾರ್ಚ್ 2020, 14:13 IST
   

ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವ ಭೀತಿಯ ಕಾರಣಕ್ಕಾಗಿ ಶುಕ್ರವಾರದಿಂದ (ಮಾ. 20) 31ರ ತನಕ ಹುಬ್ಬಳ್ಳಿ–ಕೆಎಸ್‌ಆರ್‌ ಬೆಂಗಳೂರು ಜನಶತಾಬ್ದಿ ರೈಲಿನ ಸಂಚಾರವನ್ನು ಎರಡೂ ಮಾರ್ಗದಿಂದ ‌ರದ್ದು ಮಾಡಲಾಗಿದೆ.

ವಾರಕ್ಕೊಮ್ಮೆ ಸಂಚರಿಸುವ ಯಶವಂತಪುರ–ಪಂಢರಪುರ ಮತ್ತು ಮೈಸೂರು–ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಕೂಡ ರದ್ದಾಗಿದೆ. ನಿತ್ಯ ಬೆಳಗಾವಿ–ಮೈಸೂರು ನಡುವೆ ಸಂಚರಿಸುವ ವಿಶ್ವಮಾನವ ಎಕ್ಸ್‌ಪ್ರೆಸ್ ಸಂಚಾರವನ್ನು ಎರಡೂ ಮಾರ್ಗದಿಂದ ರದ್ದು ಪಡಿಸಲಾಗಿದೆ.

ನಿತ್ಯ ಸಂಚರಿಸುವ ಮೈಸೂರು–ಯಲಹಂಕ ಮಾಲ್ಗುಡಿ ಎಕ್ಸ್‌ಪ್ರೆಸ್‌, ಮೈಸೂರು–ಬೆಂಗಳೂರು ರಾಜರಾಣಿ ಎಕ್ಸ್‌ಪ್ರೆಸ್‌, ವಾರದಲ್ಲಿ ನಾಲ್ಕು ದಿನ ಸಂಚರಿಸುವ ಶಿವಮೊಗ್ಗ–ಯಶವಂತಪುರ ತತ್ಕಾಲ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌, ವಾರಕ್ಕೊಮ್ಮೆ ತೆರಳುವ ಮೈಸೂರು–ರೇಣಗುಂಟಾ ಎಕ್ಸ್‌ಪ್ರೆಸ್‌, ಯಶವಂತಪುರ–ಮಂಗಳೂರು ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ರದ್ದು ಮಾಡಲಾಗಿದೆ.

ADVERTISEMENT

ಆನ್‌ಲೈನ್‌ ಮೂಲಕ ಮುಂಗಡ ಟಿಕೆಟ್‌ ಬುಕ್‌ ಮಾಡಿದ ಪ್ರಯಾಣಿಕರ ಖಾತೆಗೆ ಟಿಕೆಟ್‌ ಹಣ ಜಮೆ ಆಗಲಿದೆ. ಕೌಂಟರ್‌ನಲ್ಲಿ ಮುಂಗಡ ಟಿಕೆಟ್‌ ಪಡೆದ ಪ್ರಯಾಣಿಕರ ಮೊಬೈಲ್‌ಗೆ ಸಂದೇಶ ಕಳುಹಿಸಲಾಗುತ್ತದೆ. ಬಳಿಕ ಅವರು ಹಣ ವಾಪಸ್ ಪಡೆಯಬಹುದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.