ಮೈಸೂರು: ಕೋವಿಡ್–19 ಲಸಿಕೆ ‘ಕೋವಿಶೀಲ್ಡ್’ನ ಕ್ಲಿನಿಕಲ್ ಟ್ರಯಲ್ ನಡೆಸಲು ಇಲ್ಲಿನ ಜೆಎಸ್ಎಸ್ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಸಜ್ಜಾಗಿದೆ.
ನಿರೀಕ್ಷೆಯಂತೆ ಸರ್ಕಾರದಿಂದ ಒಪ್ಪಂದದ ಪ್ರತಿ ದೊರೆತರೆ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 105ನೇ ಜನ್ಮದಿನವಾದ ಆಗಸ್ಟ್ 29ರಂದೇ ಆರಂಭವಾಗಲಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಪ್ರೊ–ಚಾನ್ಸಲರ್ ಡಾ.ಬಿ.ಸುರೇಶ್, ‘ಕ್ಲಿನಿಕಲ್ ಟ್ರಯಲ್ಗೆ ಎಲ್ಲ ಬಗೆಯ ಸಿದ್ಧತೆಗಳು ಪೂರ್ಣಗೊಂಡಿವೆ. ಸರ್ಕಾರದಿಂದ ಒಪ್ಪಂದ ಪತ್ರ ಶುಕ್ರವಾರ ರಾತ್ರಿ ಹೊತ್ತಿಗೆ ದೊರ ಕುವ ನಿರೀಕ್ಷೆ ಇದೆ. ಶನಿವಾರ ಆಯ್ದ 5 ಮಂದಿ ಸ್ವಯಂಸೇವಕರ ಮೇಲೆ ಕೋವಿಶೀಲ್ಡ್ ಲಸಿಕೆಯ ಪ್ರಯೋಗ ನಡೆಯಲಿದೆ’ ಎಂದು ತಿಳಿಸಿದರು.
ಪುಣೆಯಲ್ಲಿರುವ ಭಾರತೀಯ ಸೆರಂ ಸಂಸ್ಥೆ (ಎಸ್ಐಐ) ಸಹಯೋಗದೊಂದಿಗೆ, ಇಂತಹ ಪ್ರಯೋಗ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ಆಯ್ಕೆ ಮಾಡಿದೆ. ಇಲ್ಲಿ ಒಟ್ಟು 250 ಮಂದಿ ಸ್ವಯಂಸೇವಕರು ಸ್ವಇಚ್ಛೆಯಿಂದ ಪ್ರಯೋಗಕ್ಕೆ ಒಳಗಾಗಲು ಮುಂದೆ ಬಂದಿದ್ದಾರೆ. ಇವರಲ್ಲಿ ಆಯ್ದ 5 ಮಂದಿಗೆ ಶನಿವಾರ ಪ್ರಾಯೋಗಿಕವಾಗಿ ಲಸಿಕೆ ನೀಡಲು ತೀರ್ಮಾನಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.