ADVERTISEMENT

ನೀರಿನಲ್ಲಿ ಸಿಲುಕಿದ್ದ ದಂಪತಿ ರಕ್ಷಣೆಗೆ ನೆರವಾದ ‘ಪ್ರಜಾವಾಣಿ’

52 ತಾಸುಗಳ ಕಾರ್ಯಾಚರಣೆ ಯಶಸ್ವಿ: ನಿಟ್ಟುಸಿರು ಬಿಟ್ಟ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 13:32 IST
Last Updated 8 ಆಗಸ್ಟ್ 2019, 13:32 IST
ಕಲ್ಲಪ್ಪ
ಕಲ್ಲಪ್ಪ   

ಬೆಳಗಾವಿ: ತಾಲ್ಲೂಕಿನ ಕಬಲಾಪುರದಲ್ಲಿ ಉಕ್ಕಿ ಹರಿಯುತ್ತಿರುವ ಬಳ್ಳಾರಿ ನಾಲಾ ನೀರಿನಿಂದ ಆವೃತವಾಗಿದ್ದ ಮನೆಯಲ್ಲಿ ಸಿಲುಕಿದ್ದ ದಂಪತಿಯನ್ನು ಎನ್‌ಡಿಆರ್‌ಎಫ್‌ ಸಿಬ್ಬಂದಿ ಗುರುವಾರ ರಕ್ಷಿಸಿದರು.

ಕಲ್ಲಪ್ಪ (ಕಾಡಪ್ಪ) ಮತ್ತು ರತ್ನವ್ವ ಪ್ರಾಣಾಪಾಯದಿಂದ ಪಾರಾದವರು. 52 ತಾಸಿಗೂ ಹೆಚ್ಚಿನ ಸಮಯ ಕಾರ್ಯಾಚರಣೆ ನಡೆಯಿತು.

ಮಂಗಳವಾರ ಬೆಳಿಗ್ಗೆ ಅವರು ಸಿಲುಕಿದ್ದರು. ಅಂದು ರಕ್ಷಣಾ ತಂಡ ನಡೆಸಿದ ಪ್ರಯತ್ನ ಫಲ ನೀಡಿರಲಿಲ್ಲ. ಅವರ ನೆರವಿಗೆ ದಾವಿಸಿದ್ದ ಯುವಕನನ್ನು ರಕ್ಷಿಸುವಲ್ಲಿ ಎನ್‌ಡಿಆರ್‌ಎಫ್‌ ಹಾಗೂ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದರು.

ADVERTISEMENT

ಮನೆಯೊಳಗೆ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ಈ ದಂಪತಿ ಹೆಂಚುಗಳನ್ನು ತೆಗೆದು ಮನೆ ಏರಿದ್ದರು. ಬುಧವಾರ ಗೋಡೆಯೂ ಕುಸಿದಿದ್ದರಿಂದ, ಸಮೀಪದಲ್ಲಿದ್ದ ಮಾವಿನ ಮರ ಏರಿ ಕುಳಿತಿದ್ದರು. ಕುಡಿಯುವ ನೀರು, ಊಟವಿಲ್ಲದೇ ಅಸ್ವಸ್ಥಗೊಂಡಿರುವ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‌ದಂಪತಿ ನೀರಿನಲ್ಲಿ ಸಿಲುಕಿರುವ ಬಗ್ಗೆ ಕಬಲಾಪುರದ ನಿವಾಸಿ ನಾಗೇಶ್ ಎನ್ನುವವರು ಕೊಟ್ಟಿದ್ದ ಮಾಹಿತಿಯನ್ನು ‘ಪ್ರಜಾವಾಣಿ’ ಪ್ರತಿನಿಧಿಯು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಅವರಿಗೆ ನೀಡಿದ್ದರು. ಅವರು ತಾಲ್ಲೂಕು ಪಂಚಾಯ್ತಿ ಇಒ ಮಲ್ಲಿಕಾರ್ಜುನ ಅವರಿಗೆ ಸೂಚಿಸಿದ್ದರು. ಬಳಿಕ ಕಾರ್ಯಾಚರಣೆ ಆರಂಭವಾಗಿತ್ತು. ಧಾರಾಕಾರ ಮಳೆ ಹಾಗೂ ನಾಲೆಯಲ್ಲಿ ರಭಸದಿಂದ ನೀರು ಹರಿಯುತ್ತಿದ್ದುದು ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಗುರುವಾರ ಮಳೆ ಕೊಂಚ ಬಿಡುವು ಕೊಟ್ಟಿದ್ದು ಸಹಕಾರಿಯಾಯಿತು. ಎನ್‌ಡಿಆರ್‌ಎಫ್‌ ಸಿಬ್ಬಂದಿ ಹಲವು ಅಡೆತಡೆಗಳ ಬೋಟ್‌ನಲ್ಲಿ ತೆರಳಿ ದಂಪತಿಯನ್ನು ರಕ್ಷಿಸಿದರು.

ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಸತೀಶ ಜಾರಕಿಹೊಳಿ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.