ADVERTISEMENT

ಮೂಗಿಗೆ ತುಪ್ಪ ಒರೆಸುವ ಯತ್ನ: ಜನಾಗ್ರಹ ಆಂದೋಲನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 15:56 IST
Last Updated 4 ಜೂನ್ 2021, 15:56 IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಘೋಷಿಸಿರುವ ₹ 500 ಕೋಟಿ ಮೊತ್ತದ ಎರಡನೇ ಪರಿಹಾರ ‍ಪ್ಯಾಕೇಜ್‌ ಕೂಡ ನಿರಾಶಾದಾಯಕ. ಇದು ಜನರ ಮೂಗಿಗೆ ತುಪ್ಪ ಸವರುವ ಯತ್ನ ಎಂದು ಜನಾಗ್ರಹ ಆಂದೋಲನ ಟೀಕಿಸಿದೆ.

ಈ ಕುರಿತು ಜಂಟಿ ಹೇಳಿಕೆ ನೀಡಿರುವ ಜನಾಗ್ರಹದ ಸಸಿಕಾಂತ್‌ ಸೆಂಥಿಲ್‌, ಎಚ್‌.ಆರ್‌. ಬಸವರಾಜಪ್ಪ, ಚಾಮರಸ ಮಾಲಿ ಪಾಟೀಲ್‌, ಮಾವಳ್ಳಿ ಶಂಕರ್‌, ಕೆ.ಎಲ್‌. ಅಶೋಕ್‌, ಸ್ವರ್ಣಾ ಭಟ್‌, ಯಾಸೀನ್‌ ಮಲ್ಪೆ, ಯೂಸೂಫ್‌ ಕನ್ನಿ, ಡಾ.ಸಿದ್ದನಗೌಡ ಪಾಟೀಲ ಮತ್ತು ನೂರ್‌ ಶ್ರೀಧರ್‌, ‘ಗ್ರಾಮೀಣ ಕೂಲಿ ಕಾರ್ಮಿಕರು, ಸಣ್ಣ ಮತ್ತು ಅತಿಸಣ್ಣ ರೈತರು, ಆದಿವಾಸಿಗಳು ಮತ್ತು ಅಲೆಮಾರಿ ಜನರನ್ನು ಪ್ಯಾಕೇಜ್‌ನಲ್ಲಿ ಪರಿಗಣಿಸಿಯೇ ಇಲ್ಲ’ ಎಂದು ದೂರಿದ್ದಾರೆ.

ಕೋವಿಡ್‌ ಲಾಕ್‌ಡೌನ್‌ನಿಂದ ಜನರು ನಿತ್ಯದ ಆದಾಯ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಅತ್ಯಲ್ಪ ನೆರವು ನೀಡುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. 70 ಲಕ್ಷ ಬಡ ಕುಟುಂಬಗಳಿರುವ ರಾಜ್ಯದಲ್ಲಿ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ ಐದು ಲಕ್ಷ ಜನರನ್ನೂ ತಲುಪುವುದಿಲ್ಲ ಎಂದು ಟೀಕಿಸಿದ್ದಾರೆ.

ADVERTISEMENT

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಕುಟುಂಬಗಳಿಗೂ ಸಮಗ್ರ ಆಹಾರದ ಕಿಟ್‌ ಮತ್ತು ತಿಂಗಳಿಗೆ ₹ 5,000 ನೆರವು ನೀಡಬೇಕು. ಕೋವಿಡ್‌ನಿಂದ ಅನಾಥವಾಗಿರುವ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡಬೇಕು. ರೈತರಿಗೆ ಉಚಿತವಾಗಿ ಗೊಬ್ಬರ ಮತ್ತು ಬಿತ್ತನೆ ಬೀಜ ವಿತರಿಸಬೇಕು. ರಾಜ್ಯದ ಎಲ್ಲ ಜನರಿಗೂ ಉಚಿತವಾಗಿ ಕೋವಿಡ್‌ ಲಸಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.