ಯಾದಗಿರಿ: ಜಿಲ್ಲೆಯ ಸೈದಾಪುರ ಪಟ್ಟಣದ ಚಿನ್ನದ ವ್ಯಾಪಾರಿಗಳು ಮಾರ್ಚ್ 5 ರಂದು ದುಬೈ ಪ್ರವಾಸಕ್ಕೆ ತೆರಳಿ ಮಾರ್ಚ್ 12 ರಂದು ಹೈದರಾಬಾದ್ನಿಂದ ಬಂದಿದ್ದು, ಇವರ ಮೇಲೆ ವೈದ್ಯರು ನಿಗಾ ಇರಿಸಿದ್ದಾರೆ.
ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ಎಂ.ಎಸ್.ಪಾಟೀಲ 'ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿ, 'ದುಬೈ ಪ್ರವಾಸಕ್ಕೆ ತೆರಳಿದ ಇಬ್ಬರು ವ್ಯಕ್ತಿಗಳು ಮಾರ್ಚ್ 12ಕ್ಕೆ ಸೈದಾಪುರ ಪಟ್ಟಣಕ್ಕೆ ಆಗಮಿಸಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗಿದೆ. ಪಟ್ಟಣಕ್ಕೆ ಬಂದ ಮೇಲೆ ವೈದ್ಯರಿಂದ ತಪಾಸಣೆ ಮಾಡಲಾಗಿದೆ. 14 ದಿನ ಪ್ರತ್ಯೇಕವಾಗಿರಿಸಿ ನಿಗಾ ಇಡಲಾಗುತ್ತದೆ. ಸದ್ಯಕ್ಕೆ ಕೊರೊನಾ ಸೋಂಕಿತ ಲಕ್ಷಣಗಳು ಕಂಡು ಬಂದಿಲ್ಲ. ಆದರೂ ನಿಗಾವಹಿಸಲಾಗಿದೆ' ಎಂದರು.
'ಇಬ್ಬರನ್ನು ಪ್ರತ್ಯೇಕ ಕೊಠಡಿ (ಕ್ವಾರಂಟೈನ್)ಯಲ್ಲಿರಿಸಿ ನಿಗಾ ವಹಿಸಲಾಗಿದೆ'. 'ಇಬ್ಬರನ್ನು ವೈದ್ಯರು ಪರೀಕ್ಷೆ ನಡೆಸಿದ ನಂತರ ರಕ್ತ ಮತ್ತು ಗಂಟಲಿನ ದ್ರವ ಪಡೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತಿದೆ' ಎಂದು ತಿಳಿಸಿದರು.
'ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದ್ದಾರೆ. ಪಟ್ಟಣಕ್ಕೆ ಬಂದ ನಂತರ ನಾವೇ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಕೊಂಡಿದ್ದೇವೆ. ಮನೆಯಲ್ಲಿ ಪ್ರತ್ಯೇಕವಾಗಿ ಇರುವಂತೆ ಸೂಚಿಸಿದ್ದಾರೆ. ಅದರಂತೆ ಮಾಡುತ್ತಿದ್ದೇವೆ'. 'ಕೊರೊನಾ ಭೀತಿಯಿಂದ ದುಬೈನಲ್ಲಿಯೂ ಮಾಸ್ಕ್ ಹಾಕಿಕೊಂಡೆ ಪ್ರವಾಸ ಮಾಡಿದ್ದೇವೆ' ಎಂದು ದುಬೈ ಪ್ರವಾಸದಿಂದ ವಾಪಸ್ಸಾದ ವ್ಯಕ್ತಿ ತಿಳಿಸಿದ್ದಾರೆ.
ಇಬ್ಬರು ಸ್ನೇಹಿತರು ಪ್ರತಿ ವರ್ಷದಂತೆ ಈ ವರ್ಷವೂ ದುಬೈ ಪ್ರವಾಸ ಕೈಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.