ADVERTISEMENT

Covid-19 Karnataka Update: 1,291 ಹೊಸ ಪ್ರಕರಣ, 40 ಮಂದಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2021, 15:12 IST
Last Updated 19 ಜುಲೈ 2021, 15:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 1,291 ಮಂದಿಗೆ ಸೋಂಕು ತಗುಲಿದ್ದು, ಸೋಂಕು ದೃಢ ಪ್ರಮಾಣ ಶೇ 0.94ಕ್ಕೆ ತಗ್ಗಿದೆ. ಎರಡನೇ ಅಲೆ ಕಾಣಿಸಿಕೊಂಡ ನಂತರ ವರದಿಯಾದ ಕನಿಷ್ಠ ಪ್ರಕರಣ ಹಾಗೂ ಪ್ರಮಾಣ ಇವಾಗಿವೆ.

ಕೋವಿಡ್‌ ಪೀಡಿತರ ಪೈಕಿ ಸೋಮವಾರ 40 ಮಂದಿ ಅಸುನೀಗಿದ್ದು, ಮೃತರ ಒಟ್ಟು ಸಂಖ್ಯೆ 36,197ಕ್ಕೆ ಏರಿದೆ. ಕೋವಿಡ್‌ ಮರಣ ಪ್ರಮಾಣ ದರ ಶೇ 3.09ರಷ್ಟಿದೆ.

ಒಂದು ದಿನದಲ್ಲಿ 3,015 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಈವರೆಗೆ 28.21 ಲಕ್ಷ ಜನರಿಗೆ ಕಾಯಿಲೆ ವಾಸಿಯಾದಂತಾಗಿದೆ. ಸಕ್ರಿಯ ಪ್ರಕರಣಗಳು ಮತ್ತಷ್ಟು ಇಳಿದಿವೆ. ಸದ್ಯ 27,527 ಜನ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್‌ ಪರೀಕ್ಷೆ ಇಳಿಮುಖವಾಗಿದೆ. ಹಿಂದಿನ 24 ಗಂಟೆಗಳಲ್ಲಿ 1.35 ಲಕ್ಷ ಮಾದರಿಗಳನ್ನಷ್ಟೇ ಪರೀಕ್ಷಿಸಲಾಗಿದೆ.

ADVERTISEMENT

ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಸೋಂಕಿತರ ಸಂಖ್ಯೆ ತಗ್ಗಿದೆ. ಬೆಂಗಳೂರಿನಲ್ಲಿ 266, ಚಿಕ್ಕಮಗಳೂರಿನಲ್ಲಿ 100, ದಕ್ಷಿಣ ಕನ್ನಡದಲ್ಲಿ 126, ಹಾಸನ ಹಾಗೂ ಮೈಸೂರಿನಲ್ಲಿ ತಲಾ 125 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. 12 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಎರಡಂಕಿಗೆ ಇಳಿದಿದೆ. ಇನ್ನೂ 12 ಜಿಲ್ಲೆಗಳಲ್ಲಿ ಇದು ಒಂದಂಕಿಯಷ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಪಟ್ಟವರ ಸಂಖ್ಯೆ 28.85 ಲಕ್ಷಕ್ಕೆ ತಲುಪಿದೆ.

ಸೋಂಕು ಪೀಡಿತರ ಪೈಕಿ ಬೆಂಗಳೂರಿನಲ್ಲಿ 6 ಮಂದಿ ಮೃತರಾಗಿದ್ದಾರೆ. ದಕ್ಷಿಣ ಕನ್ನಡ, ಹಾಸನ ಮತ್ತು ಮೈಸೂರಿನಲ್ಲಿ ತಲಾ 4, ಬೆಳಗಾವಿ ಹಾಗೂ ಕೊಡಗಿನಲ್ಲಿ ತಲಾ ಮೂವರು ಸಾವಿಗೀಡಾಗಿದ್ದಾರೆ. ಸೋಮವಾರ ಮೃತರಾದವರ ಪೈಕಿ 38 ಮಂದಿ 40 ವರ್ಷ ಮೇಲ್ಪಟ್ಟವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.