ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಲಸಿಕೆ ಹಂಚಿಕೆಗೆ ಸಕಲ ಸಿದ್ಧತೆಯನ್ನು ಮಾಡಲಾಗಿದೆ. ಜನವರಿ 16 ಶನಿವಾರದಂದು ಲಸಿಕೆ ಹಂಚಿಕೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ರಾಜ್ಯದಲ್ಲಿ ಶುಕ್ರವಾರದಂದು ಹೊಸತಾಗಿ 708 ಮಂದಿಯಲ್ಲಿ ಕೋವಿಡ್-19 ಸೋಂಕು ಕಂಡುಬಂದಿದೆ. ಇದರೊಂದಿಗೆ ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 930,668ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಕ್ರಿಯ ಪ್ರಕರಣಗಳ ಸಂಖ್ಯೆ 8,790 ಆಗಿದೆ.
ಕಳೆದ 24 ತಾಸಿನಲ್ಲಿ 643 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಕೊರೊನಾ ವೈರಸ್ನಿಂದ ಚೇತರಿಸಿಕೊಂಡವರ ಸಂಖ್ಯೆ 9,09,701ಕ್ಕೆ ತಲುಪಿದೆ.
ಹಾಗೆಯೇ ಶುಕ್ರವಾರದಂದು ಮೂರು ಮಂದಿ ಮೃತಪಟ್ಟಿದ್ದು, ಇದುವರೆಗೆ 12,158 ಮಂದಿ ಸಾವನ್ನಪ್ಪಿದ್ದಾರೆ. ಐ.ಸಿ.ಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 183 ಆಗಿದೆ.
ಬೆಂಗಳೂರು ನಗರದಲ್ಲಿ ಇಂದು 399 ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,94,213ಕ್ಕೆ ತಲುಪಿದೆ. ಹಾಗೆಯೇ 248 ಬಿಡುಗಡೆ ಹೊಂದಿದ್ದು, ಇದುವರೆಗೆ 3,84,145 ಮಂದಿ ಚೇತರಿಸಿದ್ದಾರೆ. ಇನ್ನು ನಗರದಲ್ಲಿ 5,710 ಸಕ್ರಿಯ ಪ್ರಕರಣಗಳಿವೆ. 24 ತಾಸಿನಲ್ಲಿ ಇಬ್ಬರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 4,357ಕ್ಕೆ ತಲುಪಿದೆ.
ಏತನ್ಮಧ್ಯೆ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಾಳೆ ದೇಶದ್ಯಾಂತ ಪ್ರಾರಂಭವಾಗಲಿರುವ ಕೋವಿಡ್ ಲಸಿಕಾ ಅಭಿಯಾನ ಬಹುಮುಖ್ಯ ಹಂತವನ್ನು ತಲುಪಿದ್ದು, ಲಸಿಕೆ ಬಗ್ಗೆ ಯಾವುದೇ ವದಂತಿಗಳಿಗೆ ಕಿವಿ ಕೊಡದೆ ಅಭಿಯಾನಕ್ಕೆ ಬೆಂಬಲ ನೀಡಬೇಕೆಂದು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.