ADVERTISEMENT

Covid-19 Karnataka Update: 44,846ಕ್ಕೆ ಇಳಿದ ಸಕ್ರಿಯ ಪ್ರಕರಣ

ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ: ದೃಢ ಪ್ರಮಾಣ ಶೇ 1.02ಕ್ಕೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 4:12 IST
Last Updated 5 ಜುಲೈ 2021, 4:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 1,564 ಮಂದಿ ಕೊರೊನಾ ಸೋಂಕಿತರಾಗಿರುವುದು ಭಾನುವಾರ ದೃಢಪಟ್ಟಿದ್ದು, ಸೋಂಕು ದೃಢ ಪ್ರಮಾಣ ದರವು ಶೇ 1.02ರಷ್ಟಕ್ಕೆ ಇಳಿಕೆಯಾಗಿದೆ.

ಇವು ಕೋವಿಡ್ ಎರಡನೇ ಅಲೆಯ ಅವಧಿಯಲ್ಲಿ ವರದಿಯಾದ ಕನಿಷ್ಠ ಪ್ರಕರಣಗಳು ಹಾಗೂ ದೃಢ ಪ್ರಮಾಣವಾಗಿದೆ. ರಾಜ್ಯದಲ್ಲಿ ಕಳೆದ ಮಾ.23ಕ್ಕೆ ಹೊಸ ಪ್ರಕರಣಗಳ ಸಂಖ್ಯೆ ಎರಡು ಸಾವಿರದ ಗಡಿ ದಾಟಿತ್ತು. ಕಳೆದೊಂದು ತಿಂಗಳಿನಿಂದ ಹೊಸ ಪ್ರಕರಣ ಹಾಗೂ ದೃಢ ಪ್ರಮಾಣ ಇಳಿಮುಖ ಮಾಡಿದೆ.

ಮೂರು ತಿಂಗಳಲ್ಲಿ ಮೊದಲ ಬಾರಿ ಹೊಸ ‍ಪ್ರಕರಣಗಳು ಎಲ್ಲ ಜಿಲ್ಲೆಗಳಲ್ಲಿ 500ರ ಗಡಿಯೊಳಗಡೆ ವರದಿಯಾಗಿವೆ. ಬೆಂಗಳೂರಿನಲ್ಲಿ 352, ಮೈಸೂರಿನಲ್ಲಿ 162, ದಕ್ಷಿಣ ಕನ್ನಡದಲ್ಲಿ 154, ಕೊಡಗಿನಲ್ಲಿ 150, ತುಮಕೂರಿನಲ್ಲಿ 116 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. 15 ಜಿಲ್ಲೆಗಳಲ್ಲಿ ಈ ಸಂಖ್ಯೆ ಎರಡಂಕಿ ಹಾಗೂ 8 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ. ಬಾಗಲಕೋಟೆ ಹಾಗೂ ಯಾದಗಿರಿಯಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ. ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 28.53 ಲಕ್ಷ ದಾಟಿದೆ.

ADVERTISEMENT

ಕೋವಿಡ್ ಮರಣ ಪ್ರಕರಣಗಳ ಸಂಖ್ಯೆ ಕೂಡ ಇಳಿಕೆ ಕಂಡಿದ್ದು, ಸೋಂಕಿತರಲ್ಲಿ 59 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಮರಣ ಪ್ರಮಾಣ ದರವು ಶೇ 3.77 ರಷ್ಟು ವರದಿಯಾಗಿದೆ. ರಾಜ್ಯದ 19 ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ವರದಿಯಾಗಿವೆ. ಮೈಸೂರಿನಲ್ಲಿ 9, ದಕ್ಷಿಣ ಕನ್ನಡದಲ್ಲಿ 8, ಬಳ್ಳಾರಿಯಲ್ಲಿ 7, ಧಾರವಾಡದಲ್ಲಿ 5 ಮಂದಿ ಸಾವಿಗೀಡಾಗಿದ್ದಾರೆ. ಬೆಂಗಳೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ 5ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಮರಣ ಪ್ರಕರಣಗಳು ವರದಿಯಾಗಿವೆ. ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 35,367ಕ್ಕೆ ತಲುಪಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 44,846 ಇಳಿಕೆಯಾಗಿದೆ. ಸೋಂಕಿತರಲ್ಲಿ 4,775 ಮಂದಿಗೆ ಕಾಯಿಲೆ ವಾಸಿಯಾಗಿದೆ. ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 27.73 ಲಕ್ಷ ದಾಟಿದೆ.

ಮೀಸಲು ಹಾಸಿಗೆ ಸಂಖ್ಯೆಯಲ್ಲಿ ಕಡಿತ
ಬೆಂಗಳೂರು:
ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವುದರಿಂದ ಸೋಂಕಿತರಿಗೆ ಮೀಸಲಿರಿಸಿದ ಹಾಸಿಗೆಗಳಲ್ಲಿ ಶೇ 30ರಷ್ಟನ್ನು ಅನ್ಯ ರೋಗಿಗಳಿಗೆ ಬಳಸಲು ಅವಕಾಶ ಮಾಡಿಕೊಡಲಾಗಿದೆ.

ಫೆಬ್ರವರಿಯಲ್ಲಿ ಕೆಲ ದಿನಗಳು 500ರ ಆಸುಪಾಸಿನಲ್ಲಿದ್ದ ಹೊಸ ಪ್ರಕರಣಗಳ ಸಂಖ್ಯೆ ಏಪ್ರಿಲ್ ತಿಂಗಳಲ್ಲಿ 50 ಸಾವಿರದ ಆಸುಪಾಸು ತಲುಪಿತ್ತು. ಸಕ್ರಿಯ ಪ್ರಕರಣಗಳ ಸಂಖ್ಯೆ ಆರು ಲಕ್ಷದ ಗಡಿ ದಾಟಿತ್ತು. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಜತಗೆ ಖಾಸಗಿ ಆಸ್ಪತ್ರೆಗಳಲ್ಲಿನ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಸರ್ಕಾರವು ಗುರುತಿಸಿತ್ತು.

ಕಳೆದೊಂದು ತಿಂಗಳಿನಿಂದ ಸೋಂಕಿತರ ಸಂಖ್ಯೆ ಇಳಿಮುಖ ಮಾಡಿರುವ ಪರಿಣಾಮ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟಿದ್ದ ಹಾಸಿಗೆಗಳಲ್ಲಿ ಶೇ 86 ರಷ್ಟು ಹಾಸಿಗೆಗಳು ಖಾಲಿ ಉಳಿದಿವೆ. ಹೀಗಾಗಿ, ಹಂತ ಹಂತವಾಗಿ ಹಾಸಿಗೆಗಳ ಸಂಖ್ಯೆಯನ್ನು ಕಡಿತ ಮಾಡಿ, ಕೋವಿಡೇತರ ಚಿಕಿತ್ಸೆಗೆ ಬಳಸಿಕೊಳ್ಳಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ.

ಕೋವಿಡ್ ಚಿಕಿತ್ಸೆಗೆ ಜೂನ್ ಮೊದಲ ವಾರದಲ್ಲಿ 63,761 ಹಾಸಿಗೆಗಳು ಮೀಸಲಿದ್ದವು. ಆ ಸಂಖ್ಯೆ ಈಗ 45,720ಕ್ಕೆ ಇಳಿಕೆಯಾಗಿದೆ. 18,041 ಹಾಸಿಗೆಗಳನ್ನು ಈಗಾಗಲೇ ಕೋವಿಡೇತರ ಚಿಕಿತ್ಸೆಗೆ ಬಳಸಿಕೊಳ್ಳಲಾಗಿದೆ. ಐಸಿಯು ಹಾಸಿಗೆಗಳ ಸಂಖ್ಯೆಯನ್ನು 3,321ರಿಂದ 2,799ಕ್ಕೆ, ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳ ಸಂಖ್ಯೆಯನ್ನು 3,014ರಿಂದ 2,203ಕ್ಕೆ ಹಾಗೂ ಎಚ್‌ಡಿಯು ಹಾಸಿಗೆಗಳನ್ನು 26,817ರಿಂದ 10,569ಕ್ಕೆ ಇಳಿಕೆ ಮಾಡಲಾಗಿದೆ.

ಕೊರೊನಾ ಸೋಂಕಿತರಲ್ಲಿ ಶೇ 90ರಷ್ಟು ಮಂದಿ ಮನೆ ಆರೈಕೆಗೆ ಒಳಗಾಗುತ್ತಿದ್ದಾರೆ. ಶೇ 5ರಷ್ಟು ಮಂದಿ ಮಾತ್ರ ಆಸ್ಪತ್ರೆ ಚಿಕಿತ್ಸೆಗೆ ಒಳಪಡುತ್ತಿದ್ದಾರೆ. ಹಾಗಾಗಿ, ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟಿರುವ ಹಾಸಿಗೆಗಳ ಸಂಖ್ಯೆಯು ಇನ್ನಷ್ಟು ಇಳಿಕೆ ಮಾಡಿ, ಮೂರನೇ ಅಲೆ ಮುನ್ಸೂಚನೆ ದೊರೆತರೆ ಮತ್ತೆ ಹೆಚ್ಚಳ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.