ಹುಬ್ಬಳ್ಳಿ: ಹೃದಯಾಘಾತಕ್ಕೆ ಕೋವಿಡ್ ಕಾರಣವಲ್ಲ ಎಂದು ಕಾಂಗ್ರೆಸ್ ಸರ್ಕಾರ ರಚಿಸಿದ ತಜ್ಞರ ಸಮಿತಿ ಹೇಳಿದೆ. ಹೀಗಾಗಿ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಿರಬಹುದು ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ವಿಜ್ಞಾನಿಗಳ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆ ಯಾದಾಗ ಮೋದಿ ಅವರು ನಿರ್ಲಕ್ಷ್ಯ ವಹಿಸದೆ ಲಸಿಕೆ ತಯಾರಿಸಲು ಅಗತ್ಯ ಅನುದಾನ ನೀಡಿದರು. ಸಿದ್ದರಾಮಯ್ಯ ಅವರು ಸಹ ಅದೇ ಲಸಿಕೆ ಪಡೆದಿದ್ದಾರೆ. ವಿದೇಶದ ಲಸಿಕೆ ಹಾಕಿಸಿಕೊಂಡಿಲ್ಲ ಎಂದರು.
ಮೋದಿ ಅವರ ನೇತೃತ್ವದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಇತರ ದೇಶಗಳಿಗಿಂತ ಸಮರ್ಥವಾಗಿ ಎದುರಿಸಲಾಗಿದೆ. ಈ ಕಾರಣಕ್ಕೆ ಕ್ಷುಲ್ಲಕ ಹೇಳಿಕೆ ನೀಡಿದ್ದಾರೆ. ಆ ಮೂಲಕ ದೇಶಕ್ಕೆ, ದೇಶದ ವಿಜ್ಞಾನಿಗಳಿಗೆ ಅಪಮಾನ ಮಾಡಿದ್ದಾರೆ. ಅವರ ಬೇಜವಾಬ್ದಾರಿ ಹೇಳಿಕೆ ಖಂಡನೀಯ. ಹೀಗಾಗಿ ಅವರು ವಿಜ್ಞಾನಿಗಳ ಕ್ಷಮೆ ಕೇಳಬೇಕು ಎಂದರು.
ದೇಶ ಔಷಧ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ದೇಶದ ಔಷಧ, ಲಸಿಕ್ ಬಗ್ಗೆ ವಿದೇಶಿಯರಿಗೆ ಅನುಮಾನ ಬರಬೇಕು, ನಮ್ಮ ಔಷಧ ವಿದೇಶಗಳಲ್ಲಿ ಮಾರಾಟವಾಗಬಾರದು ಎಂಬ ಉದ್ದೇಶದಿಂದ ಆ ರೀತಿಯ ಹೇಳಿಕೆ ನೀಡಿದ್ದೀರಾ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ರಚಿಸಿರುವುದಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರಿಗೆ ಇಲ್ಲಿಯೇ ಸಂಬಾಳಿಸಲು ಸಾಧ್ಯವಾಗುತ್ತಿಲ್ಲ, ಕೇಂದ್ರಕ್ಕೆ ಹೋಗಿ ಏನು ಮಾಡುತ್ತಾರೆ? ನೀವು ರಾಷ್ಟ್ರ ರಾಜಕಾರಣಕ್ಕೆ ಬನ್ನಿ ಎಂಬ ಸಂದೇಶವನ್ನು ಆ ಪಕ್ಷದ ಹೈಕಮಾಂಡ್ ರವಾನಿಸಿದೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.
ದಿಢೀರನೇ ಈ ನೇಮಕ ಮಾಡಲಾಗಿದೆ. ದೆಹಲಿಗೆ ಕರೆಸಿಕೊಳ್ಳುವ ನೆಪದಲ್ಲಿ ಇಲ್ಲಿ ಜಾಗ ಖಾಲಿ ಮಾಡಿ ಎಂದು ಹೇಳಿದಂತಿದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ತಾವೇ ಎಂದು ಪಕ್ಷದ ಆಂತರಿಕ ವಲಯದಲ್ಲಿ ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಅವಧಿ ಪೂರ್ಣಗೊಳಿಸುವುದಾಗಿ ಹೇಳುತ್ತಿದ್ದಾರೆ. ಇದು ಅತ್ಯಂತ ದೌರ್ಭಾಗ್ಯದ ಸ್ಥಿತಿ. ಕಾಂಗ್ರೆಸ್ ಅಧಿಕಾರದಲ್ಲಿರುವ ಯಾವ ರಾಜ್ಯಗಳಲ್ಲಿಯೂ ಅಲ್ಲಿನ ಮುಖ್ಯಮಂತ್ರಿಗಳು ಈ ರೀತಿ ಹೇಳುತ್ತಿಲ್ಲ. ಇಲ್ಲಿ ಸಮಸ್ಯೆ ಇರುವುದಕ್ಕೆ ಈ ರೀತಿ ಹೇಳುತ್ತಿದ್ದಾರೆ ಎಂದರು.
ಬಿಜೆಪಿಯಲ್ಲಿ ಮಾತ್ರ ಸಾಂಸ್ಥಿಕ ಚುನಾವಣೆ ನಡೆಸಿ ರಾಜ್ಯ ಘಟಕದ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಯನ್ನು ನೇಮಕ ಮಾಡಲಾಗುತ್ತದೆ ಎಂಬುದು ಊಹಾಪೋಹ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ವಕ್ತಾರರು ಉತ್ತರಿಸುತ್ತಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.