ADVERTISEMENT

ಕೋವಿಡ್‌ಗೆ ಒಂದೇ ದಿನ ಎರಡು ಸಾವು

ಸಾವಿನ ಸಂಖ್ಯೆ 3ಕ್ಕೆ ಏರಿಕೆ, ಮತ್ತೆ 18 ಹೊಸ ಪ್ರಕರಣಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 13:57 IST
Last Updated 12 ಜುಲೈ 2020, 13:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಡಿಕೇರಿ: ಜಿಲ್ಲೆಯಲ್ಲಿ ಕೋವಿಡ್‌ಗೆ ಎರಡು ಸಾವು ಸಂಭವಿಸಿದೆ.

ವಿರಾಜಪೇಟೆ ತಾಲ್ಲೂಕಿನ ನಿವಾಸಿ, 86 ವರ್ಷದ ಮಹಿಳೆಯೊಬ್ಬರು ಕೋವಿಡ್‌ನಿಂದ ಶನಿವಾರ ರಾತ್ರಿ 10.45ಕ್ಕೆ ಮೃತಪಟ್ಟಿದ್ದಾರೆ.

ಇವರು ಜುಲೈ 6ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಮರು ದಿನ ಸೋಂಕು ತಗುಲಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿತ್ತು. ಇವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು. ಸರ್ಕಾರದ ಮಾರ್ಗಸೂಚಿಯಂತೆ ಮೃತರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ADVERTISEMENT

ಮಡಿಕೇರಿ ತಾಲ್ಲೂಕು ಚೇರಂಬಾಣೆಯ 77 ವರ್ಷದ ವೃದ್ಧರೊಬ್ಬರು ಭಾನುವಾರ ಸಂಜೆ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇವರೂ ಸಹ ಕಿಡ್ನಿ ಸಮಸ್ಯೆ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಸೋಮವಾರ ಸರ್ಕಾರದ ಮಾರ್ಗಸೂಚಿಯಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 13 ಪ್ರಕರಣಗಳು ಪತ್ತೆಯಾಗಿವೆ. ಸೋಮವಾರಪೇಟೆ ತಾಲ್ಲೂಕು ತಲ್ತರೆಶೆಟ್ಟಳ್ಳಿ ಗ್ರಾಮದ ನಿವಾಸಿ, ಬೆಂಗಳೂರಿಂದ ವಾಪಾಸಾಗಿದ್ದ ಮತ್ತು ಜ್ವರ ಲಕ್ಷಣವಿದ್ದ 36 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ವಿರಾಜಪೇಟೆ ತಾಲ್ಲೂಕು ತೋರ ಗ್ರಾಮದ ಜ್ವರ ಲಕ್ಷಣವಿದ್ದ 29 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಗೋಣಿಕೊಪ್ಪಲು ವಿಜಯನಗರ ಬಡಾವಣೆಯ ನಿವಾಸಿ 39 ವರ್ಷದ ಮಹಿಳೆ ಆರೋಗ್ಯ ಕಾರ್ಯಕರ್ತರೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಮಡಿಕೇರಿಯ ಮೆಡಿಕಲ್ ಕಾಲೇಜು ಬಳಿಯ ಪರಿಷ್ ಬಾಣೆ ನಿವಾಸಿ 34 ವರ್ಷದ ಮಹಿಳೆ ಆರೊಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ತಗುಲಿದೆ.

ಕುಶಾಲನಗರದ ಶಿವರಾಮ ಕಾರಂತ ಬಡಾವಣೆಯ 55 ವರ್ಷದ ಮಹಿಳೆ ಆರೋಗ್ಯ ಕಾರ್ಯಕರ್ತರೊಬ್ಬರನ್ನು ಸೋಂಕು ಬಾಧಿಸಿದೆ. ಇತ್ತೀಚೆಗೆ ಕೋವಿಡ್ ಸೋಂಕಿನಿಂದ ಮೃತಪಟ್ಟ ಸೋಮವಾರಪೇಟೆ ತಾಲ್ಲೂಕು ಕುಶಾಲನಗರದ ದಂಡಿನಪೇಟೆಯ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ 25 ವರ್ಷದ ಮಹಿಳೆ, 45 ವರ್ಷದ ಮಹಿಳೆ, 49 ವರ್ಷದ ಪುರುಷ, 40 ವರ್ಷದ ಮಹಿಳೆ, 22 ವರ್ಷದ ಮಹಿಳೆ, 20 ವರ್ಷದ ಯುವಕ, 17 ವರ್ಷದ ಯುವತಿ, 24 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ.

ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆಯ ಊರುಗುತ್ತಿ ನಿವಾಸಿ, ಮಹಾರಾಷ್ಟ್ರದಿಂದ ವಾಪಸಾಗಿದ್ದ ಜ್ವರ ಲಕ್ಷಣಗಳಿದ್ದ 63 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ ಗ್ರಾಮದ ಅಂಬೇಡ್ಕರ್ ಬ್ಲಾಕ್‌ನ 45 ವರ್ಷದ ಮಹಿಳೆಯೊಬ್ಬರಿಗೆ ಸೋಂಕಿದೆ.

ಸುಂಟಿಕೊಪ್ಪದ ಜ್ವರ ಲಕ್ಷಣಗಳಿದ್ದ 11 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿಯ ಪುಟಾಣಿ ನಗರದ, ಚಾಮರಾಜ ಬಂಗಲೆ ಬಳಿಯ ಆಂಬುಲೆನ್ಸ್‌ ಚಾಲಕ 53 ವರ್ಷದ ಪುರುಷರಿಗೆ ಸೋಂಕಿದೆ. ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆ ನಿವಾಸಿ, 63 ವರ್ಷದ ಪುರುಷರೊಬ್ಬರಲ್ಲೂ ಸೋಂಕು ಕಾಣಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.