ಕಾರವಾರ:ಕಾಳಿ ನದಿಗೆ ಕಟ್ಟಲಾಗಿರುವ ಬೊಮ್ಮನಹಳ್ಳಿ ಪಿಕ್ಅಪ್ ಅಣೆಕಟ್ಟೆಯ ಹಿನ್ನೀರಿನಲ್ಲಿ ಮೊಸಳೆಗಳು ಹೆಣ್ಣಾನೆಯೊಂದರ ಮೇಲೆ ದಾಳಿ ಮಾಡಿ ಕೊಂದುಹಾಕಿವೆ.ಹಳಿಯಾಳ ತಾಲ್ಲೂಕಿನ ಕಲಭಾಂವಿ ಗ್ರಾಮದ ಹತ್ತಿರ ಆನೆಯ ಮೃತದೇಹ ಸಿಕ್ಕಿದೆ.
‘10ರಿಂದ 12 ವರ್ಷಗಳ ಆನೆ ಇದಾಗಿದ್ದು, ತನ್ನ ಗುಂಪಿನೊಂದಿಗೆ ಅಣೆಕಟ್ಟೆಯ ಹಿನ್ನೀರು ಕುಡಿಯಲು ಬಂದಿತ್ತು. ಪ್ರಖರವಾದ ಬಿಸಿಲಿನಿಂದಾಗಿನೀರಿನ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿಆನೆಯು ಕೆಸರಿನಲ್ಲಿ ಸ್ವಲ್ಪ ದೂರ ಹೆಜ್ಜೆ ಹಾಕಿನೀರು ಕುಡಿಯುತ್ತಿತ್ತು. ಆಗ ನಾಲ್ಕೈದು ಮೊಸಳೆಗಳು ಏಕಾಏಕಿ ದಾಳಿ ಮಾಡಿದವು. ಆನೆಯ ಕಾಲುಗಳು ಕೆಸರಿನಲ್ಲಿ ಸಿಲುಕಿದ್ದ ಕಾರಣ ಅದಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ದಾಂಡೇಲಿ ವನ್ಯಜೀವಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಗೊರವರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಮೊಸಳೆಗಳು ಬಹುಶಃಮೂರುದಿನಗಳ ಹಿಂದೆಯೇ ದಾಳಿ ಮಾಡಿರಬಹುದು. ಆನೆಯಕಳೇಬರಬಿದ್ದಿದ್ದನ್ನು ನಾವುಮಂಗಳವಾರ ಗಮನಿಸಿದೆವು. ಬಳಿಕ ಅದನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿ ಸುಡಲಾಯಿತು’ ಎಂದು ತಿಳಿಸಿದರು.
ಬೊಮ್ಮನಹಳ್ಳಿ ಅಣೆಕಟ್ಟೆಯ ಹಿನ್ನೀರಿನಲ್ಲಿ 60ಕ್ಕೂ ಅಧಿಕ ದೊಡ್ಡ ಮೊಸಳೆಗಳಿವೆ. ಬೇಸಿಗೆ ಕಾಲದಲ್ಲಿ ನೀರು ಕಡಿಮೆಯಾದಂತೆ ಅವು ನದಿ ದಂಡೆಗೆ ಬರುತ್ತವೆ. ನೀರು ಕುಡಿಯಲು ಬರುವ ಪ್ರಾಣಿಗಳನ್ನು ಹೊಂಚುಹಾಕಿ ಬೇಟೆಯಾಡುತ್ತವೆ. ಆಗಾಗ ದನ, ಕರುಗಳಮೇಲೆ ದಾಳಿ ಮಾಡುವ ಬಗ್ಗೆಯೂ ದೂರುಗಳು ಕೇಳಿ ಬರುತ್ತಿರುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.