ADVERTISEMENT

ಆಧಾರ್‌, ನೆಫ್ಟ್‌ ಮೂಲಕ ಹಣ ವರ್ಗಾವಣೆಗೆ ಅಡ್ಡಿ: ₹ 427 ಕೋಟಿ ಬೆಳೆ ವಿಮೆ ಬಾಕಿ

ರಾಜೇಶ್ ರೈ ಚಟ್ಲ
Published 20 ಅಕ್ಟೋಬರ್ 2020, 20:17 IST
Last Updated 20 ಅಕ್ಟೋಬರ್ 2020, 20:17 IST
ಬಿ.ಸಿ. ಪಾಟೀಲ
ಬಿ.ಸಿ. ಪಾಟೀಲ   

ಬೆಂಗಳೂರು: ರಾಜ್ಯದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಆರಂಭಗೊಂಡ 2016–17ರ ಮುಂಗಾರು ಹಂಗಾಮಿನಿಂದ 2019– 20ರ ಮುಂಗಾರು ಅವಧಿವರೆಗೆ, 3.73 ಲಕ್ಷ ಫಲಾನುಭವಿಗಳಿಗೆ ₹ 427.08 ಕೋಟಿ ವಿಮೆ ಪರಿಹಾರ ಇತ್ಯರ್ಥಕ್ಕೆ ಬಾಕಿ ಇದೆ.

ಈ ಅವಧಿಯಲ್ಲಿ ರೈತರು, ಕೇಂದ್ರ– ರಾಜ್ಯ ಸರ್ಕಾರದ ಪಾಲು ಸೇರಿ ಒಟ್ಟು ₹ 5,991.31 ಕೋಟಿ ವಿಮೆ ಕಂತನ್ನು ವಿಮೆ ಕಂಪನಿಗಳಿಗೆ ಪಾವತಿಸಲಾಗಿದೆ. ರಾಜ್ಯ ಸರ್ಕಾರ 41.75 ಲಕ್ಷ ರೈತರಿಗೆ ₹ 5,600.69 ಕೋಟಿ ವಿಮೆ ಪರಿಹಾರ ಲೆಕ್ಕ ಹಾಕಿದೆ. ವಿಮೆ ಕಂಪನಿಗಳು 38.02 ಲಕ್ಷ ಫಲಾನುಭವಿಗಳಿಗೆ ₹ 5,173.61 ಕೋಟಿ (ಶೇ 92.37) ಇತ್ಯರ್ಥಪಡಿಸಿವೆ. ವಿಮೆ ಕಂಪನಿಗಳ ಆಕ್ಷೇಪಣೆಯಿಂದಾಗಿ ಇನ್ನೂ ಶೇ 7.63ರಷ್ಟು ಮೊತ್ತ ಪಾವತಿ ಆಗಬೇಕಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

2016ರ ಮುಂಗಾರು ಅವಧಿಯ ₹ 6.93 ಕೋಟಿ ವಿಮೆ ಪರಿಹಾರ ಫಲಾನುಭವಿಗಳ ಖಾತೆಗಳಿಗೆ ಸೇರಿಲ್ಲ. ಈ ಮೊತ್ತದಲ್ಲಿ ₹ 1.98 ಕೋಟಿ, ಬ್ಯಾಂಕ್‌ ಖಾತೆ ವಿವರ ತಪ್ಪಾಗಿದ್ದರಿಂದ ಜಮೆ ಆಗಿಲ್ಲ. ₹ 4.23 ಕೋಟಿ ಎಸ್ಕ್ರೋ (ವಿತರಣೆಯಾಗದ ಮೊತ್ತ ಜಮೆಗೆ ಸರ್ಕಾರ ತೆರೆದ ಪ್ರತ್ಯೇಕ ಖಾತೆ) ಖಾತೆಯಲ್ಲಿದೆ. ಹೊಸದಾಗಿ ರಚನೆಯಾದ ಗ್ರಾಮ ಪಂಚಾಯಿತಿ ವಿಮಾ ಘಟಕಗಳು 545 ಫಲಾನುಭವಿಗಳಿಗೆ ₹ 72 ಲಕ್ಷ ಪರಿಹಾರ ಮೊತ್ತ ಇತ್ಯರ್ಥ ಪಡಿಸಬೇಕಿದೆ. 2016ರ ಹಿಂಗಾರು ಅವಧಿಯಲ್ಲಿ, ಆಧಾರ್‌ ಮತ್ತು ನೆಫ್ಟ್‌ ಮೂಲಕ ವರ್ಗಾವಣೆಯಾಗದ ₹ 32.87 ಕೋಟಿಯನ್ನು ಕೂಡಾ ವಿಮೆ ಕಂಪನಿಗಳು ಎಸ್ಕ್ರೋ ಖಾತೆಗೆ ವರ್ಗಾಯಿಸಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬೆಳೆ ಸಮೀಕ್ಷೆಯ ಜೊತೆ ತಾಳೆಯಾಗುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತಪಡಿಸಿ 2018–19ನೇ ಸಾಲಿನ ಮುಂಗಾರು ಹಂಗಾಮಿನ ಒಟ್ಟು 25,860 ಫಲಾನುಭವಿಗಳಿಗೆ ಯುನೈಟೆಡ್‌ ಇಂಡಿಯಾ ಇನ್ಸೂರೆನ್ಸ್ ಕಂಪನಿ (ಯುಐಐಸಿ) ₹ 31.89 ಕೋಟಿ ಹಾಗೂ ನ್ಯೂ ಇಂಡಿಯಾ ಇನ್ಸೂರೆನ್ಸ್‌ ಕಂಪನಿ ₹ 9.60 ಕೋಟಿ ಸೇರಿ ಒಟ್ಟು ₹ 41.50 ಕೋಟಿ ಪರಿಹಾರ ನೀಡಲು ಹಿಂದೇಟು ಹಾಕಿವೆ. ಬೆಳೆ ಸಮೀಕ್ಷೆಯಲ್ಲಿರುವ ಬೆಳೆ ಮತ್ತು ಕ್ಲೇಮ್‌ ಪ್ರಸ್ತಾವನೆಯಲ್ಲಿರುವ ಬೆಳೆಗಳಿಗೆ ಹೊಂದಾಣಿಕೆಯಾಗುತ್ತಿಲ್ಲ ಎನ್ನುವುದು ವಿಮಾ ಕಂಪನಿಗಳ ವಾದ. ಆದರೆ, ಕೇಂದ್ರ ಸರ್ಕಾರ ನೀಡಿರುವ ವಿನಾಯಿತಿ ಪ್ರಕಾರ, ಯಾವುದೇ ಹೋಬಳಿಯಲ್ಲಿ ಯಾವುದಾದರೂ ಸರ್ವೆ ನಂಬರ್‌ನಲ್ಲಿ ಕ್ಲೇಮ್‌ ಮಾಡಿದ ಬೆಳೆ ಇದ್ದರೂ ವಿಮೆ ಪರಿಹಾರ ಮೊತ್ತ ಲೆಕ್ಕ ಹಾಕಿ ಪಾವತಿಸಬೇಕಿದೆ.

ಈ ಅವಧಿಯ ₹ 23.99 ಕೋಟಿಯನ್ನು ಆಧಾರ್‌ ಮತ್ತು ನೆಫ್ಟ್‌ ಮೂಲಕ ರೈತರ ಖಾತೆಗಳಿಗೆ ಕಂಪನಿಗಳು ವರ್ಗಾಯಿಸಿದ್ದರೂ ವಿವರ ತಪ್ಪಾಗಿದ್ದರಿಂದ ಖಾತೆಗೆ ಜಮೆ ಆಗಿಲ್ಲ. ಹೀಗಾಗಿ, ಈ ಮೊತ್ತವನ್ನು ವಿಮೆ ಕಂಪನಿಗಳು ಎಸ್ಕ್ರೊ ಖಾತೆಗೆ ವರ್ಗಾಯಿಸಿವೆ. 2018ರ ಹಿಂಗಾರಿನಲ್ಲೂ ₹ 2.85 ಕೋಟಿ ವಾಪಸ್‌ ಬಂದಿದ್ದು, ರೈತರ ಖಾತೆ ಸಂಖ್ಯೆಯನ್ನು ಸಂಗ್ರಹಿಸಿ ವಿಮೆ ಮೊತ್ತ ವಿತರಿಸಬೇಕಿದೆ. 2019ರ ಮುಂಗಾರಿನಲ್ಲಿ ಪ್ರವಾಹಪೀಡಿತ ಒಂಬತ್ತು ಜಿಲ್ಲೆಗಳಲ್ಲಿ ಬೆಳೆ ನಷ್ಟ ಅನುಭವಿಸಿದ 1.92 ಲಕ್ಷ ರೈತರಿಗೆ ಮಧ್ಯಂತರ ವಿಮೆ ಪರಿಹಾರ ವಿತರಿಸಲು ₹ 141.14 ಕೋಟಿ ಹಾಗೂ ಬಿತ್ತನೆ ವೈಫಲ್ಯಗೊಂಡ 1.17 ಲಕ್ಷ ರೈತರಿಗೆ ₹ 154.11 ಕೋಟಿ ವಿಮೆ ಪರಿಹಾರ ನೀಡಲು ಲೆಕ್ಕ ಹಾಕಲಾಗಿತ್ತು. ವಿಮಾ ಸಂಸ್ಥೆಯವರು ಎಸ್‌ಬಿಐನಲ್ಲಿ ಖಾತೆ ತೆರೆದು, ಆ ಖಾತೆಯನ್ನು ‘ಸಂರಕ್ಷಣೆ’ ತಂತ್ರಾಂಶಕ್ಕೆ ಇಂಟೆಗ್ರೇಟ್ ಮಾಡಬೇಕಿದೆ. ಈಗಾಗಲೇ 2,16,032 ಫಲಾನುಭವಿಗಳಿಗೆ ₹ 205.16 ಕೋಟಿ ವಿಮೆ ಮೊತ್ತ ಇತ್ಯರ್ಥ ಪಡಿಸಿದ್ದು, ಉಳಿದ ₹ 90.09 ಕೋಟಿ ಪರಿಹಾರ ಮೊತ್ತ ನೀಡಬೇಕಿದೆ. ಇದೇ ಅವಧಿಯ ಮುಂಗಾರು ಹಂಗಾಮಿನಲ್ಲಿ ವಿಮೆ ನೋಂದಣಿ ಮಾಡಿಸಿದ ರೈತರಿಗೆ ₹ 229.37 ಕೋಟಿ ಪರಿಹಾರ ಲೆಕ್ಕ ಹಾಕಲಾಗಿದೆ. ಆದರೆ, ವಿಮೆ ಕಂಪನಿಯವರು ರೈತರ ಖಾತೆಗಳಿಗೆ ಪರಿಹಾರ ಮೊತ್ತ ಇನ್ನೂ ಜಮೆ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.