ADVERTISEMENT

ಬೆಳೆಹಾನಿ: ರೈತರ ಖಾತೆಗೆ ₹1033.60 ಕೋಟಿ ಪರಿಹಾರ; 24 ಗಂಟೆಗಳಲ್ಲಿ ಜಮೆ

14.24 ಲಕ್ಷ ಫಲಾನುಭವಿಗಳಿಗೆ ಪೂರಕ ಪರಿಹಾರದ ವಿಶೇಷ ಪ್ಯಾಕೇಜ್‌ ನೀಡಿದ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 14:33 IST
Last Updated 27 ನವೆಂಬರ್ 2025, 14:33 IST
‘ಮುಂದಿನ ವಾರ ರೈತರ ಖಾತೆಗೆ ₹900 ಕೋಟಿ’
‘ಮುಂದಿನ ವಾರ ರೈತರ ಖಾತೆಗೆ ₹900 ಕೋಟಿ’   

ಬೆಂಗಳೂರು: ಮುಂಗಾರು ಹಂಗಾಮಿನಲ್ಲಾದ ಅತಿವೃಷ್ಟಿಯಿಂದ ಬೆಳೆನಷ್ಟ ಅನುಭವಿಸಿದ 27 ಜಿಲ್ಲೆಗಳ 14.24 ಲಕ್ಷ ರೈತರಿಗೆ ರಾಜ್ಯ ಸರ್ಕಾರ ₹1,033.60 ಕೋಟಿ ಪರಿಹಾರ ನೀಡಿದ್ದು, ಎಲ್ಲ ರೈತರ ಬ್ಯಾಂಕ್‌ ಖಾತೆಗಳಿಗೆ 24 ಗಂಟೆಗಳಲ್ಲಿ ಈ ಮೊತ್ತ ಜಮೆಯಾಗಲಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ರಾಜ್ಯ ವಿಪತ್ತು ನಿರ್ವಹಣಾ ನಿಧಿಯ (ಎಸ್‌ಡಿಆರ್‌ಎಫ್‌) ₹1,218 ಕೋಟಿ ಮೊತ್ತದ ಹೊರತಾಗಿ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್‌ಗೆ ₹8,500 ಹೆಚ್ಚುವರಿ ಪರಿಹಾರ ಘೋಷಿಸಿದೆ. ಈ ವಿಶೇಷ ಪ್ಯಾಕೇಜ್‌ ವಿತರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮುಂಗಾರಿನಲ್ಲಿ 82.56 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಜೂನ್‌ನಿಂದ ಸೆಪ್ಟಂಬರ್‌ ಅವಧಿಯಲ್ಲಿನ ಅತಿವೃಷ್ಟಿಯಿಂದ 14.58 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿತ್ತು. ₹10,748 ಕೋಟಿ ಹಾನಿ ಅಂದಾಜಿಸಲಾಗಿತ್ತು. ಮುಖ್ಯವಾಗಿ ತೊಗರಿ 5.36 ಲಕ್ಷ ಹೆಕ್ಟೇರ್‌, ಹೆಸರು ಕಾಳು 2.63 ಲಕ್ಷ ಹೆಕ್ಟೇರ್‌, ಹತ್ತಿ 2.68 ಲಕ್ಷ ಹೆಕ್ಟೇರ್‌ ಹಾಗೂ ಮೆಕ್ಕೆಜೋಳ 1.21 ಲಕ್ಷ ಹೆಕ್ಟೇರ್‌ ಹಾನಿಯಾಗಿರುವುದು ಜಂಟಿ ಸಮೀಕ್ಷೆಯಲ್ಲಿ ದೃಢಪಟ್ಟಿತ್ತು’ ಎಂದರು.

ADVERTISEMENT

ಎಸ್‌ಡಿಆರ್‌ಎಫ್‌ ಮಾನದಂಡಗಳ ಪ್ರಕಾರ ಗರಿಷ್ಠ ಎರಡು ಹೆಕ್ಟೇರ್‌ಗೆ ಸೀಮಿತವಾಗಿ 14.24 ಲಕ್ಷ ರೈತರಿಗೆ ₹1,218.03 ಕೋಟಿ ಪರಿಹಾರ ವಿತರಿಸಲಾಗಿದೆ. ಈಗ ನೀಡುತ್ತಿರುವ ಹೆಚ್ಚುವರಿ ಪರಿಹಾರ ₹1,033.60 ಕೋಟಿ ಸೇರಿ ಒಟ್ಟು ₹2,251.63 ಕೋಟಿ  ನೀಡಿದಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.