ಬೆಂಗಳೂರು: ಮತ್ತಿನಲ್ಲಿ ಕಾರು ಗುದ್ದಿಸಿ ಇಬ್ಬರ ಪ್ರಾಣ ತೆಗೆದಾತನಿಗೆ ಸದಾ ಬಾರ್ನದ್ದೇ ಚಿಂತೆ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ಮುಖಂಡ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಕಚೇರಿಯಲ್ಲಿ ಬೇಕಾದರೆ ನೆಹರೂ ಹುಕ್ಕಾ ಬಾರ್ ತೆರೆಯಲಿ. ಅದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಸಿ.ಟಿ.ರವಿ ಹೇಳಿಕೆ ನೀಡಿದ್ದರು.
ಆ ಹಿನ್ನೆಲೆಯಲ್ಲಿ ಗುರುವಾರ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಮತ್ತಿನಲ್ಲಿ ಕಾರು ಗುದ್ದಿಸಿ ಇಬ್ಬರ ಪ್ರಾಣ ತೆಗೆದಾತನಿಗೆ ಸದಾ ಬಾರ್ನದ್ದೇ ಚಿಂತೆ. ಇನ್ನೆಷ್ಟು ಪ್ರಾಣ ತೆಗೆಯುವ ಯೋಚನೆ ಇದೆ ಸಿ.ಟಿ.ರವಿ? ಮೂರು ವರ್ಷದಲ್ಲಿ ನೆರೆಯಿಂದ ಮನೆ ಕಳೆದುಕೊಂಡವರಿಗೆ ಸುಸಜ್ಜಿತ ಮನೆ ಕಟ್ಟಿಸಿಕೊಟ್ಟು ಬೇಕಿದ್ದರೆ ಕೊಳಕು ನಾಲಿಗೆಯ ಸಿಟಿ ರವಿ ಆ ಮನೆಗಳಿಗೆ ತನ್ನದೇ ಹೆಸರಿಟ್ಟುಕೊಳ್ಳಲಿ' ಎಂದು ಹರಿಹಾಯ್ದಿದೆ.
'ನೆಲ, ಜಲದ ವಿಚಾರದಲ್ಲಿ ರಾಜಕೀಯ ಹಿತಾಸಕ್ತಿಯನ್ನು ಪಕ್ಕಕ್ಕಿಟ್ಟು ರಾಜ್ಯದ ಪರ ನಿಲ್ಲಬೇಕು. ಈ ನಾಡಿನ ಜನರ ಹಿತದ ಪರ ನಿಲ್ಲಬೇಕು. ಆದರೆ, ತಮಿಳುನಾಡಿನ ಉಸ್ತುವಾರಿಯಾದ ಕಾರಣಕ್ಕೆ ಮೇಕೆದಾಟು ಯೋಜನೆ ವಿರೋಧಿಸುವ ಸಿಟಿ ರವಿಗೆ ತನ್ನ ರಾಜಕೀಯ ಹಿತಾಸಕ್ತಿಯೇ ಮುಖ್ಯವಾಗಿದೆ ಹೊರತು ಕನ್ನಡಿಗರ ಹಿತವಲ್ಲ' ಎಂದು ಕಾಂಗ್ರೆಸ್ ಟೀಕಿಸಿದೆ.
'ಕನ್ನಡ ಧ್ವಜವನ್ನು ಹಾರಿಸದೆ ಅವಮಾನಿಸಿದ್ದು, ಕನ್ನಡ ಧ್ವಜವನ್ನು ವಿರೋಧಿಸಿದ್ದು, ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ತಡೆದಿದ್ದು ಮತ್ತು ಈಗ ಮೇಕೆದಾಟು ಯೋಜನೆಗೆ ವಿರೋಧಿಸುತ್ತಿರುವುದು... ಇವು ಸಿ.ಟಿ.ರವಿ ಮಾಡಿರುವ ನಾಡದ್ರೋಹಿ ಕೆಲಸಗಳು' ಎಂದು ಕಾಂಗ್ರೆಸ್ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.