ಬೆಂಗಳೂರು: ‘ನಾನು 500 ಎಕರೆ ಜಮೀನು ಹೊಂದಿರುವುದಾಗಿ ಆರೋಪ ಮಾಡಿರುವಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
‘ನನ್ನ ವಿರುದ್ಧ ಆರೋಪ ಮಾಡಿರುವ ನಿಮಗೆ ಕಾನೂನೇ ಉತ್ತರ ಕೊಡುತ್ತದೆ. ಕಾನೂನಿನ ಆ ಕಬಂಧ ಬಾಹುಗಳಿಂದ ನೀವು ಮತ್ತು ನಿಮ್ಮ ಜೀ ಹುಜೂರ್ ನಾಯಕರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ನೀವು ಮಾಡಿರುವ ಸುಳ್ಳು ಆರೋಪಕ್ಕೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ನನ್ನ ಬಳಿ ಇದೆ ಎಂದು ಹೇಳಲಾದ 500 ಎಕರೆಗೆ ಭೂಮಿಗೆ ದಾಖಲೆಗಳನ್ನು ತಂದು ಕೊಟ್ಟರೆ, ತಂದು ಕೊಟ್ಟ ಪುಣ್ಯಾತ್ಮನಿಗೆ ಅರ್ಧದಷ್ಟು ದಾನವಾಗಿ ಕೊಟ್ಟು ಬಿಡುತ್ತೇನೆ’ ಎಂದೂ ರವಿ ಸವಾಲು ಹಾಕಿದ್ದಾರೆ.
‘ಮಹಾನ್ ಸುಳ್ಳುಗಾರ ಲಕ್ಷ್ಮಣ ಮಾಧ್ಯಮಗಳ ಮುಂದೆ ಕುಳಿತು ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಾರೆ. ಇವರು ತಮ್ಮದೇ ಪಕ್ಷದ ನಾಯಕರ ಬೇನಾಮಿ ಆಸ್ತಿ ಬಗ್ಗೆ ಹೇಳುವ ಬದಲು ನನ್ನ ಹೆಸರು ಹೇಳಿದ್ದಾರೆ. ನಿಮ್ಮ ಪಕ್ಷದ ನಾಯಕರು ಹೊಲದಲ್ಲಿ ಗುದ್ದಲಿ, ಪಿಕಾಸಿ ಹಿಡಿದು ಕೂಲಿ ನಾಲಿ ಮಾಡಿ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿದ್ದಾರೆಯೇ’ ಎಂದೂ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.