ADVERTISEMENT

ಮಾಂಸ ತಿಂದು ನಾಗಬನಕ್ಕೆ ಸಿ.ಟಿ.ರವಿ ಭೇಟಿ: ಆರೋಪ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 23:00 IST
Last Updated 22 ಫೆಬ್ರುವರಿ 2023, 23:00 IST
ಶಾಸಕ ಸಿ.ಟಿ.ರವಿ ಅವರು ಫೆ.19ರಂದು ಭಟ್ಕಳದಲ್ಲಿ ಶಾಸಕ ಸುನಿಲ ನಾಯ್ಕ ಮನೆಯಲ್ಲಿ ಮಾಂಸದೂಟ ಮಾಡಿರುವ ದೃಶ್ಯ
ಶಾಸಕ ಸಿ.ಟಿ.ರವಿ ಅವರು ಫೆ.19ರಂದು ಭಟ್ಕಳದಲ್ಲಿ ಶಾಸಕ ಸುನಿಲ ನಾಯ್ಕ ಮನೆಯಲ್ಲಿ ಮಾಂಸದೂಟ ಮಾಡಿರುವ ದೃಶ್ಯ   

ಭಟ್ಕಳ (ಉತ್ತರ ಕನ್ನಡ ಜಿಲ್ಲೆ): ಫೆ.19ರಂದು ಪಟ್ಟಣಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಶಿರಾಲಿಯಲ್ಲಿರುವ ಸ್ಥಳೀಯ ಶಾಸಕ ಸುನೀಲ ನಾಯ್ಕ ಅವರ ಮನೆಯಲ್ಲಿ ಮಾಂಸದೂಟ ಮಾಡಿ, ಬಳಿಕ ಸಂಜೆ ಪಟ್ಟಣದ ರಾಜಾಂಗಣ ನಾಗಬನ ಹಾಗೂ ಅದರ ಪಕ್ಕದಲ್ಲಿರುವ ಕರಿಬಂಟ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜೈನ ಸಮುದಾಯಕ್ಕೆ ಒಳಪಟ್ಟ ನಾಗಬನದ ಪಕ್ಕದಲ್ಲಿರುವ ಕರಿಬಂಟ ದೇವಸ್ಥಾನದ ಒಳ ಪ್ರವೇಶಿಸಿ ಕೈಮಗಿದು ಹೊರ ಬಂದ ವಿಡಿಯೊ ಕೂಡ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸ್ಥಳೀಯ ಆಸ್ತಿಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಜೈನ ಸಮುದಾಯವರು ಪೂಜಿಸುವ ದೇವಸ್ಥಾನಕ್ಕೆ ಅವರು ಮಾಂಸದೂಟ ಮಾಡಿ ಪ್ರವೇಶಿಸಿ ಅಪಚಾರ ಎಸಗಿದ್ದಾರೆ’ ಎಂಬ ಮಾತು ಕ್ಷೇತ್ರದಲ್ಲಿ ಚರ್ಚೆಯಾಗುತ್ತಿದೆ.

ADVERTISEMENT

ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ: ಸಿ.ಟಿ. ರವಿ

ಮಂಡ್ಯ: ‘ಮಾಂಸ ತಿಂದು ಭಟ್ಕಳದ ನಾಗಬನದೊಳಗೆ ಹೋಗಿಲ್ಲ, ದೇವಾಲಯದ ಹೊರಾವರಣದಲ್ಲಿ ನಿಂತು ದರ್ಶನ ಪಡೆದಿದ್ದೇನೆ’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ‘ಈ ಕುರಿತು ಕೆಲವರು ವಿವಾದ ಹುಟ್ಟು ಹಾಕುತ್ತಿದ್ದಾರೆ. ನಾನು ಮಾಂಸ ತಿನ್ನುತ್ತೇನೆ, ಹಾಗಂತ ತಿಂದು ದಾರ್ಷ್ಟ್ಯ ತೋರಿಸುವುದಿಲ್ಲ. ಮಾಂಸ ತಿಂದು ದೇವಾಲಯಕ್ಕೆ ಹೋಗುತ್ತೀನಿ, ಏನಿವಾಗ ಎಂದು ಕೇಳುವುದಿಲ್ಲ. ವ್ರತ, ಪೂಜೆ ಮಾಡುವವನು ನಾನು, ದೇವರ ಬಗ್ಗೆ ಶ್ರದ್ಧೆ ಇದೆ’ ಎಂದರು.

‘ಕ್ಷೇತ್ರ ಬದಲಾವಣೆ ಸಂಬಂಧ ಹೈಕಮಾಂಡ್‌ ಯಾವುದೇ ಸೂಚನೆ ನೀಡಿದರೂ ಪಾಲಿಸುತ್ತೇನೆ. ಚಿಕ್ಕಮಗಳೂರು, ಮಂಡ್ಯ ಮಾತ್ರವಲ್ಲ, ಜಮ್ಮು ಕಾಶ್ಮೀರದಲ್ಲೂ ಸ್ಪರ್ಧೆಗೆ ಸಿದ್ಧ’ ಎಂದರು.


ಮಾಂಸ ಬಿಟ್ಟು, ಜನಪರ ವಿಷಯ ಚರ್ಚಿಸಲಿ: ಸಿದ್ದರಾಮಯ್ಯ

ಬಾಗಲಕೋಟೆ: ‘ಅಭಿವೃದ್ಧಿ, ಜನಪರ ವಿಷಯಗಳ ಬಗ್ಗೆ ಚರ್ಚಿಸಬೇಕೇ ಹೊರತು, ವೈಯಕ್ತಿಕ ಧಾರ್ಮಿಕ ಆಚರಣೆ ಚರ್ಚೆ ಮಾಡುವ ವಿಷಯವಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಮಾಂಸ ತಿಂದು ಸಿ.ಟಿ. ರವಿ ದೇವಸ್ಥಾನ ಪ್ರವೇಶಿಸಿದ ಬಗ್ಗೆ ಹುನಗುಂದದಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ‘ಮಾಂಸ ಸೇವನೆ ಮಾಡುವುದು, ಮಾಡದಿರುವುದು, ದೇವಸ್ಥಾನ
ಗಳಿಗೆ ಹೋಗುವುದು, ಹೋಗದಿರುವುದು ವೈಯಕ್ತಿಕ ವಿಚಾರಗಳು. ಅಭಿವೃದ್ಧಿ ಮಾಡದ ಬಿಜೆಪಿ ಇಂತಹ ವಿಷಯಗಳನ್ನೇ ವಿವಾದವನ್ನಾಗಿ
ಮಾಡಿಕೊಳ್ಳುತ್ತದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.