ADVERTISEMENT

ಸೀತೆಯನ್ನು ರಾಮ ಕಾಡಿಗೆ ಕಳಿಸಿದ್ದು ಕರುಣೆಯಿಂದ: ಸಿಟಿ ರವಿ

ಮಡಿವಾಳ ಮಾಚಿದೇವ ಜಯಂತಿ ಆಚರಣೆಯಲ್ಲಿ ಸಿ.ಟಿ. ರವಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 20:15 IST
Last Updated 1 ಫೆಬ್ರುವರಿ 2020, 20:15 IST
   

ಬೆಂಗಳೂರು: ‘ರಾಮನು ಸೀತೆಯನ್ನು ಕಾಡಿಗೆ ಕಳಿಸಿದ್ದು ನಿರ್ದಯದಿಂದಲ್ಲ, ಕರುಣೆಯಿಂದ. ಅಗಸನೊಬ್ಬನ ಮಾತಿಗೆ ಬೆಲೆ ಕೊಟ್ಟು ರಾಮ ಈ ಕಾರ್ಯ ಮಾಡಿದ. ಅದೇ ನಿಜವಾದ ಪ್ರಜಾಪ್ರಭುತ್ವ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ‘ನಾವು ಗೆದ್ದ ಕ್ಷಣದಿಂದ ಐದು ವರ್ಷಗಳವರೆಗೆ ಮುಕುಟವಿಲ್ಲದ ಮಹಾರಾಜರಂತೆ ವರ್ತಿಸುತ್ತೇವೆ. ಆದರೆ, ರಾಜನಾಗಿದ್ದ ರಾಮ, ಸಾಮಾನ್ಯ ಅಗಸನ ಮಾತಿಗೂ ಬೆಲೆ ನೀಡಿದ್ದ’ ಎಂದು ಹೇಳಿದರು.

‘ಉಡದಾರ, ಜನಿವಾರ ಎಲ್ಲ ಧರ್ಮ ಅಲ್ಲ. ಮೌಲ್ಯಗಳೇ ನಿಜವಾದ ಧರ್ಮ. ನಮ್ಮ ಪೂರ್ವಿಕರು ಹೇಳಿದ್ದೂ ಇದನ್ನೇ. ಒಳ್ಳೆಯದರಿಂದ ರೂಪುಗೊಂಡಿರುವುದೇ ಧರ್ಮ. ಜಾತಿ ಮೆಚ್ಚಿ ಯಾವ ಭಗವಂತನೂ ಪ್ರತ್ಯಕ್ಷವಾಗುವುದಿಲ್ಲ. ಜಾತಿ ಕಾರಣದಿಂದ ಯಾರೂ ಶ್ರೇಷ್ಠರಾಗುವುದಿಲ್ಲ’ ಎಂದರು.

ADVERTISEMENT

ಚಿತ್ರದುರ್ಗ ಮಠದ ಬಸವ ಮಾಚಿದೇವ ಸ್ವಾಮೀಜಿ, ‘18 ರಾಜ್ಯಗಳಲ್ಲಿ ಮತ್ತು ಮೂರು ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಶಿಷ್ಟ ಜಾತಿಗೆ ಮಡಿವಾಳ ಸಮಾಜ ಸೇರಿದೆ. ಕರ್ನಾಟಕದಲ್ಲಿಯೂ ನಮ್ಮನ್ನು ಎಸ್‌ಸಿಗೆ ಸೇರಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಅನ್ನಪೂರ್ಣಮ್ಮ ಸಮಿತಿ ನೀಡಿದ ವರದಿ ಅನುಷ್ಠಾನಗೊಳಿಸಬೇಕು. ಮಡಿವಾಳ ಅಭಿವೃದ್ಧಿ ನಿಗಮಕ್ಕೆ ಅನುದಾನ ಒದಗಿಸಿಕೊಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.