ADVERTISEMENT

ಕಾಂಗೊ ಪ್ರಜೆ ಸಾವಿಗೆ ಪ್ರತೀಕಾರ: ಭಾರತೀಯರ ಮೇಲೆ ಹಲ್ಲೆ, ಲೂಟಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 11:42 IST
Last Updated 9 ಆಗಸ್ಟ್ 2021, 11:42 IST
ಕಾಂಗೊ ಪ್ರಜೆಯ ಸಾವಿಗೆ ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆ
ಕಾಂಗೊ ಪ್ರಜೆಯ ಸಾವಿಗೆ ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆ    

ಮೈಸೂರು: ‘ಕಾಂಗೊ ದೇಶದ ಪ್ರಜೆಯೊಬ್ಬರು ಬೆಂಗಳೂರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆಗೆ ಪ್ರತೀಕಾರವಾಗಿ ಆ ದೇಶದಲ್ಲಿ ಭಾರತೀಯರ ಮೇಲೆ ಹಲ್ಲೆ ನಡೆಸುತ್ತಿದ್ದು, ಹಲವು ಅಂಗಡಿಗಳನ್ನು ಕೊಳ್ಳೆ ಹೊಡೆಯಲಾಗಿದೆ’ ಎಂದು ಕಾಂಗೊ ದೇಶದ ರಾಜಧಾನಿ ಕಿನ್‌ಶಾಸದಲ್ಲಿ ನೆಲೆಸಿರುವ ಮೈಸೂರು ಜಿಲ್ಲೆ, ಎಚ್‌.ಡಿ.ಕೋಟೆ ತಾಲ್ಲೂಕಿನ ವಿಜಯ್‌ ದೂರಿದ್ದಾರೆ.

‘ಕಾಂಗೊ ಪ್ರಜೆ ಮೃತರಾದ ಸುದ್ದಿ ಸಾಮಾಜಿಕ ಮಾಧ್ಯಮಗಳು, ಸುದ್ದಿವಾಹಿನಿಗಳಲ್ಲಿ ಹರಡಿದ ಬೆನ್ನಲ್ಲೇ ಭಾರತೀಯರನ್ನು ಗುರಿಯಾಗಿಸಿ ದಾಳಿ ನಡೆಯುತ್ತಿದೆ. ಐದು ದಿನಗಳಿಂದ ಮನೆಯಿಂದ ಹೊರಗೆ ಇಳಿದಿಲ್ಲ. ಆತಂಕದಿಂದಲೇ ದಿನ ದೂಡುತ್ತಿ ದ್ದೇವೆ’ ಎಂದು ಭಾನುವಾರ ದೂರ ವಾಣಿ ಮೂಲಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದೂವರೆ ವರ್ಷದಿಂದ ಕುಟುಂಬ ಸಮೇತ ಇಲ್ಲಿ ನೆಲೆಸಿದ್ದೇವೆ. ಎಚ್‌.ಡಿ.ಕೋಟೆ ತಾಲ್ಲೂಕಿನ ಹಕ್ಕಿಪಿಕ್ಕಿ ಜನಾಂಗದ 20 ಮಂದಿ ಇಲ್ಲಿದ್ದೇವೆ. ಈ ನಗರದಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸೂಪರ್ ಮಾರ್ಕೆಟ್‌ ಒಳಗೊಂಡಂತೆ ಹಲವು ಅಂಗಡಿಗಳನ್ನು ಲೂಟಿ ಮಾಡಲಾಗಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಹಿಂಸೆಯಿಂದಾಗಿ ನಗರದ ಕೆಲವೆಡೆ ಬಂದ್‌ನಂತಹ ವಾತಾವರಣವಿದೆ. ಭಾರತೀಯರು ನೆಲೆಸಿರುವ ಕಡೆಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸ ಲಾಗಿದೆ’ ಎಂದು ಹೇಳಿದರು.

ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದ ಕಾಂಗೊದ ಜೋಯೆಲ್ ಶಿಂದನಿ ಮಲು (27) ಎಂಬುವರು ಆ.2 ರಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ‘ಜೋಯೆಲ್ ಸಾವಿಗೆ ಪೊಲೀಸರೇ ಕಾರಣ’ ಎಂದು ಆರೋಪಿಸಿ ಆಫ್ರಿಕಾ ಪ್ರಜೆಗಳು ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.