ಪುತ್ತೂರು: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಪುತ್ತೂರಿನ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಇದೆ.
‘ಇಲ್ಲಿನ ಪಡೀಲಿನಲ್ಲಿರುವ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಪಕ್ಕದಲ್ಲಿ ಸಚಿವರ ಮನೆ ಇತ್ತು. ಅವರು ಎರಡನೇ ಅವಧಿಗೆ ಶಾಸಕರಾಗಿದ್ದ ವೇಳೆ ಈ ಮನೆಯನ್ನು ನಿರ್ಮಿಸಿದ್ದರು. ಈ ಮನೆ ಇರುವ 13 ಸೆಂಟ್ಸ್ ನಿವೇಶನವನ್ನು ಇದೀಗ ಗೋಪ್ಯವಾಗಿ ಉಪ್ಪಿನಂಗಡಿ ಕಡೆಯ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರಿಗೆ ₹1.25 ಕೋಟಿಗೆ ಮಾರಾಟ ಮಾಡಿದ್ದಾರೆ. ಬೆಂಗಳೂರಿನಲ್ಲಿರುವ ತಮ್ಮ ಮನೆ ಸಮೀಪವೇ ಹೊಸಮನೆಯೊಂದನ್ನು ನಿರ್ಮಿಸುತ್ತಿದ್ದಾರೆ’ ಸಚಿವರ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಸುಳ್ಯ ತಾಲ್ಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದವರಾದ ಸದಾನಂದ ಗೌಡ ಅವರು ಸುಳ್ಯದಲ್ಲಿ ವಕೀಲ ವೃತ್ತಿಯಲ್ಲಿದ್ದರು. ಆ ಸಂದರ್ಭದಲ್ಲಿ ಅವರನ್ನು ಬಿಜೆಪಿ ನಾಯಕರು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು. ಮೊದಲ ಬಾರಿ ಸ್ಪರ್ಧಿಸಿ ಸೋತಿದ್ದ ಅವರಿಗೆ ಎರಡನೇ ಬಾರಿ ಅವಕಾಶ ನೀಡಿ, ಗೆಲ್ಲಿಸಿಕೊಡುವ ಮೂಲಕ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದರು.
ಪ್ರತಿ ಚುನಾವಣೆಯ ಸಂದರ್ಭದಲ್ಲೂ ಪತ್ನಿ ಡಾಟಿ ಸದಾನಂದ ಹಾಗೂ ಪುತ್ರ ಕಾರ್ತಿಕ್ ಜತೆ ಪಡೀಲಿನಲ್ಲಿರುವ ಹಾರಾಡಿ ಶಾಲಾ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸುತ್ತಿದ್ದ ಸದಾನಂದ ಗೌಡ ಅವರು ಇತ್ತೀಚೆಗೆ ನಡೆದ ಪುತ್ತೂರು ನಗರಸಭಾ ಚುನಾವಣೆಯಲ್ಲಿ ಒಬ್ಬಂಟಿಯಾಗಿ ಬಂದು ಮತ ಚಲಾಯಿಸಿ ಹೋಗಿದ್ದರು. ತಮ್ಮ ರಾಜಕೀಯ ಮತ್ತು ವೈಯಕ್ತಿಕ ಬದುಕಿನಲ್ಲಿ ಆಗಿರುವ ಸೋಲು, ನಷ್ಟದಿಂದ ಬೇಸತ್ತು ಅವರು ಈ ಮನೆಯನ್ನು ಮಾರಾಟ ಮಾಡರಬೇಕು ಎಂಬ ಶಂಕೆ ಮೂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.