ಬೆಂಗಳೂರು: ‘ರಾಜ್ಯ ಸರ್ಕಾರವು ಕೋವಿಡ್ ನೆಪವೊಡ್ಡಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಗೆ ತಡೆಯೊಡ್ಡಿದೆ. ಇದು ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ. ಈ ನಿರ್ಧಾರವನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯುತ್ತೇವೆ’ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಎನ್.ಮೂರ್ತಿ ಎಚ್ಚರಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ನಾವು ಬದ್ಧರಾಗಿದ್ದೇವೆ. ಹೀಗಾಗಿ ಜಯಂತಿ ಆಚರಣೆ ಬಗ್ಗೆ ಕೂಡಲೇ ಸುತ್ತೋಲೆ ಹೊರಡಿಸಬೇಕು. ದಲಿತ ಸಂಘಟನೆಗಳು ಸಾಂಸ್ಕೃತಿಕವಾಗಿ ಒಗ್ಗಟ್ಟಾಗಿವೆ. ಒಂದೊಮ್ಮೆ ಸರ್ಕಾರ ಆದೇಶ ಹೊರಡಿಸದಿದ್ದರೂ ನಾವೆಲ್ಲಾ ಸೇರಿ ಜಯಂತಿ ಆಚರಿಸಲಿದ್ದೇವೆ’ ಎಂದರು.
‘ಸರ್ಕಾರವು ಕೊರೊನಾ ಹೆಸರಿನಲ್ಲಿ ಹಣ ಮಾಡಲು ಮುಂದಾಗಿದೆ. ಕೊರೊನಾವನ್ನೂ ಕೇಸರೀಕರಣಗೊಳಿಸುತ್ತಿದೆ. ಹಿಂದುತ್ವವನ್ನು ಮೆರೆಸುತ್ತಿರುವ ಈ ಸರ್ಕಾರವು ತಳ ಸಮುದಾಯದವರನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ. ಇನ್ನಾದರೂ ಸರ್ಕಾರವು ನಮ್ಮ ಭಾವನೆ ಕೆರಳಿಸುವ ಕೆಲಸವನ್ನು ನಿಲ್ಲಿಸಲಿ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.