ADVERTISEMENT

ಮನೆ ಊಟ ಕೋರಿ ದರ್ಶನ್‌ ಅರ್ಜಿ | ಕೈದಿಗಳ ಮಧ್ಯೆ ಬಡವ–ಶ್ರೀಮಂತ ಭೇದ ಬೇಡ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 15:26 IST
Last Updated 31 ಜುಲೈ 2024, 15:26 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಜೈಲಿನಲ್ಲಿರುವ ಎಲ್ಲಾ ಕೈದಿಗಳ ಬಗ್ಗೆಯೂ ನಾವೂ ಅಗತ್ಯ ಮಾನವೀಯತೆ ಹೊಂದಿರಬೇಕು. ಶ್ರೀಮಂತ, ಬಡವ , ಪ್ರಭಾವಿ ಎಂದು ಕೈದಿಗಳ ಮಧ್ಯೆ ಭೇದವಿರಕೂಡದು. ಅಂತೆಯೇ, ಸೆಲೆಬ್ರಿಟಿ ವ್ಯಕ್ತಿಯೊಬ್ಬರು ಜೈಲಿನಲ್ಲಿದ್ದಾರೆ ಎಂದಾಕ್ಷಣ ಅಂತಹ ವ್ಯಕ್ತಿಗಳಿಗೆ ಕಾಯ್ದೆಯಿಂದ ಹೊರತಾದ ನಿಯಮಗಳೇನೂ ಇರುವುದಿಲ್ಲ’ ಎಂದು ಹೈಕೋರ್ಟ್‌ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಮನೆಯಿಂದ ಊಟ, ಬಟ್ಟೆ ಮತ್ತು ಹಾಸಿಗೆ ತರಿಸಿಕೊಳ್ಳಲು ಅನುಮತಿ ನೀಡುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌  ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ದರ್ಶನ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ‘ಜೈಲಿನ ಅಧಿಕಾರಿ ನೀಡಿರುವ ಪ್ರಮಾಣ ಪತ್ರದಲ್ಲಿ ದರ್ಶನ್‌ ಅವರಿಗೆ ಪೌಷ್ಟಿಕಾಂಶ ಯುಕ್ತ ಆಹಾರದ ಅಗತ್ಯವಿದೆ ಎಂದಿದ್ದಾರೆ. ಜೈಲು ಕೈಪಿಡಿಯಲ್ಲಿ ಮನೆಯೂಟ ಪಡೆಯಬಾರದು ಎಂದು ಎಲ್ಲೂ ಹೇಳಿಲ್ಲ. ಆಹಾರ ಪದ್ಧತಿ ಬಗ್ಗೆ ಮಾತ್ರವೇ ಹೇಳಲಾಗಿದೆ. ಕಾಯ್ದೆಯ ನಿಬಂಧನೆಗಳಿಗೆ ಅನುಗುಣವಾಗಿ ಜೈಲು ಕೈಪಿಡಿಯನ್ನು ನೋಡಬೇಕು’ ಎಂದರು.

ADVERTISEMENT

‘ದರ್ಶನ್ ಮನೆಯೂಟವನ್ನು ಹಕ್ಕಾಗಿ ಕೇಳುತ್ತಿಲ್ಲ. ಬದಲಿಗೆ ಮನವಿ ಮಾಡುತ್ತಿದ್ದಾರೆ. ಕರ್ನಾಟಕ ಕಾರಾಗೃಹ ಕಾಯ್ದೆಯಲ್ಲಿ ವಿಚಾರಣಾಧೀನ ಮತ್ತು ಸಜಾ ಬಂದಿಗಳು ಎಂದು ಮಾತ್ರ ಪ್ರತ್ಯೇಕಿಸಲಾಗಿದೆ. ಕಲಂ 30ರ ಪ್ರಕಾರ ವಿಚಾರಣಾಧೀನ ಕೈದಿ ಖಾಸಗಿಯಾಗಿ ಆಹಾರ ತರಿಸಿಕೊಳ್ಳಬಹುದು. ಸರ್ಕಾರ ಇದನ್ನು ಪ್ರಶ್ನಿಸಿರುವುದರಿಂದ ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ. ಮುಂದೆಯೂ ಇದು ನಮ್ಮ ಮನವಿಯೇ ಆಗಿರಲಿದೆ. ದರ್ಶನ್‌ಗೆ ಬೆನ್ನು ನೋವಿದೆ. ವೈರಲ್ ಜ್ವರ ಇದೆ. ಅವರ ಆರೋಗ್ಯ ಸರಿಯಿಲ್ಲ. ಆದ್ದರಿಂದ, ಅಗತ್ಯವಾದ ಊಟ ನೀಡಲು ಅನುಮತಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ‘ದರ್ಶನ್ ಆರೋಗ್ಯ ನಿಜಕ್ಕೂ ಕ್ಷೀಣಿಸಿದ್ದರೆ ಜೈಲಿನಲ್ಲಿ ವೈದ್ಯರಿದ್ದಾರೆ. ಅವರು ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಿದ್ದಾರೆ. ದೇಶದ ಜೈಲುಗಳಲ್ಲಿ ಕೋಟ್ಯಂತರ ವಿಚಾರಣಾಧೀನ ಕೈದಿಗಳಿದ್ದು, ಅವರಿಗೆ ಉತ್ತಮ ಆಹಾರ ಪದ್ಧತಿ ಅನ್ವಯವೇ ಊಟ ದೊರೆಯಬೇಕಿದೆ’ ಎಂದರು.

ಇದಕ್ಕೆ ಪ್ರಾಸಿಕ್ಯೂಷನ್‌ ಪರ ಹಾಜರಿದ್ದ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್–1 ಬಿ.ಎ.ಬೆಳ್ಳಿಯಪ್ಪ, ‘ಮನೆ ಊಟಕ್ಕಾಗಿ ದರ್ಶನ್ ಮನವಿ ಸಲ್ಲಿಸಿದ್ದರೆ ಅದನ್ನು ಕಾನೂನಿನ ಅನ್ವಯವೇ ಪರಿಗಣಿಸಲಾಗುವುದು’ ಎಂದರು.

ಇದನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ‘ಈ ಸಂಬಂಧ ಜೈಲು ಅಧಿಕಾರಿಗಳು ಮುಂದಿನ 10 ದಿನಗಳ ಒಳಗೆ ಸೂಕ್ತ ತೀರ್ಮಾನ ಕೈಗೊಂಡು ಕೋರ್ಟ್‌ಗೆ ತಿಳಿಸಬೇಕು’ ಎಂದು ಸೂಚಿಸಿ ಇದೇ 20ಕ್ಕೆ ವಿಚಾರಣೆ ಮುಂದೂಡಿದರು. ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ನೋಟಿಸ್ ಸ್ವೀಕರಿಸಿದರು. ದರ್ಶನ್‌ ಪರ ಹೈಕೋರ್ಟ್‌ ವಕೀಲೆ ಸಂಜೀವಿನಿ ಪಿ.ನಾವದಗಿ ವಕಾಲತ್ತು ವಹಿಸಿದ್ದಾರೆ.

ಮುದ್ದೆ ಗೋಡೆಗೆ ಹೊಡೆದರೆ ವಾಪಸು ಬರುತ್ತೆ..!

‘ಹಿಂದೊಮ್ಮೆ ಜೈಲಿನಲ್ಲಿ ನಮಗೆ ನೀಡಲಾಗುತ್ತಿರುವ ರಾಗಿ ಮುದ್ದೆಯನ್ನು ಗೋಡೆಗೆ ಹೊಡೆದರೆ ಹಿಂದಿರುಗಿ ಬರುತ್ತದೆ ಎಂದು ಕೈದಿಯೊಬ್ಬ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಬಹುಶಃ ನೀವೇನಾದರೂ ಅಂತಹ ಆಹಾರ ನೀಡುತ್ತಿದ್ದೀರಾ’ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಪ್ರಾಸಿಕ್ಯೂಷನ್‌ ಪರ ವಕೀಲರನ್ನು ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.