ಮೈಸೂರು: ಇಲ್ಲಿನ ರಂಗಾಯಣದ 2022ನೇ ಸಾಲಿನ ‘ದಸರಾ ರಂಗಗೌರವ ಪುರಸ್ಕಾರ’ಕ್ಕೆ ಖ್ಯಾತ ನಾಟಕಕಾರ ನ.ರತ್ನ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹ 10 ಸಾವಿರ, ಫಲಕವನ್ನು ಒಳಗೊಂಡಿದೆ.
‘ರತ್ನ ಅವರು ರಂಗಭೂಮಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದನ್ನು ಪರಿಗಣಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಅ.4ರಂದು ರಂಗಾಯಣದ ಭೂಮಿಗೀತದಲ್ಲಿ ನಡೆಯುವ ದಸರಾ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
‘ಜಿಲ್ಲಾ ಉಸ್ತುವಾರಿ ಸಚಿವಎಸ್.ಟಿ.ಸೋಮಶೇಖರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್
ಕುಮಾರ್ ಭಾಗವಹಿಸಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.
‘ರಂಗಭೀಷ್ಮ ಬಿ.ವಿ.ಕಾರಂತರ ಜನ್ಮೋತ್ಸವದ ಅಂಗವಾಗಿ ಸೆ.19ರಿಂದ 23ರವರೆಗೆ ‘ಭಾರತೀಯ ರಂಗ ಸಂಗೀತೋತ್ಸವ’ ಹಾಗೂ ದಸರಾ ಮುನ್ನದಿನವಾದ ಸೆ.25ರಿಂದ ಅ.4ರವರೆಗೆ ದಸರ ರಂಗೋತ್ಸವ ಆಯೋಜಿಸಲಾಗಿದೆ. 10 ನಾಟಕಗಳ ಪ್ರದರ್ಶನವಿರಲಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿರುತ್ತದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.