ದಾಬಸ್ಪೇಟೆ: ನಗರದ ಸಿದ್ಧಗಂಗಾ ಪಿಯು ಕಾಲೇಜಿನ ಮೂವರು ವಿದ್ಯಾರ್ಥಿಗಳು ಸೋಮವಾರ ಹಳೇ ನಿಜಗಲ್ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಯಲ್ಲಾಪುರದ ಪೂರ್ಣಚಂದ್ರ, ಸದಾಶಿವನಗರದ ಶಶಾಂಕ್ ಹಾಗೂ ತುರುವೇಕೆರೆಯ ಮೊಹಮ್ಮದ್ ಮೂರ್ತಜ್ ಮೃತರು. ಕಾಲೇಜಿನಿಂದ ಅ.10ರಿಂದ ದೇವರ ಹೊಸಹಳ್ಳಿ ಗ್ರಾಮದಲ್ಲಿ ಎನ್ಎಸ್ಎಸ್ ಶಿಬಿರ ಏರ್ಪಡಿಸಲಾಗಿತ್ತು. 31 ವಿದ್ಯಾರ್ಥಿಗಳು ಮತ್ತು 20 ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಸೋಮವಾರ ಬೆಳಿಗ್ಗೆ 10ರ ಸಮಯದಲ್ಲಿ ತಿಂಡಿ ತಿಂದು ಹಳೇ ನಿಜಗಲ್ ಬಳಿಯ ಕೋಡಿ ಸಿದ್ದೇಶ್ವರ ದೇವಾಲಯದ ಸ್ವಚ್ಛತೆಗೆ ವಿದ್ಯಾರ್ಥಿಗಳು ಬಂದಿದ್ದಾರೆ. ಆಗ ಈ ಮೂವರು ಸಮೀಪದ ಕೆರೆಯ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾರೆ. ಮೊದಲಿಗೆ ಪೂರ್ಣಚಂದ್ರ ಜಾರಿ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ಮೊಹಮ್ಮದ್ ಮೂರ್ತಜ್, ಶಶಾಂಕ್ ಕೂಡ ಬಿದ್ದಿದ್ದಾರೆ
ಇವರನ್ನು ರಕ್ಷಿಸಲು ಮುಂದಾದ ಶಿಬಿರದ ಅಧಿಕಾರಿಯೂ ನೀರಿನಲ್ಲಿ ಮುಳುಗುತ್ತಿದ್ದು ಇತರ ವಿದ್ಯಾರ್ಥಿಗಳು ಅವರನ್ನು ರಕ್ಷಿಸಿದ್ದಾರೆ.
ಶವಗಳನ್ನು ನೆಲಮಂಗಲದ ಅಗ್ನಿಶಾಮಕ ದಳದ ಸಿಬ್ಬಂದಿ, ದಾಬಸ್ ಪೇಟೆ ಪೊಲೀಸರು ಮೇಲೆತ್ತಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.