ADVERTISEMENT

ಅನಿರ್ದಿಷ್ಟಾವಧಿ ಧರಣಿಗೆ ಸಾರಿಗೆ ನೌಕರರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 20:54 IST
Last Updated 8 ಅಕ್ಟೋಬರ್ 2021, 20:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಸೇವೆಯಿಂದ ವಜಾ ಮಾಡಿರುವ ಸಾರಿಗೆ ಸಂಸ್ಥೆಗಳ ನೌಕರರ ಪುನರ್ ನೇಮಕಕ್ಕೆ ಒತ್ತಾಯಿಸಿ ಅ.27ರಿಂದ ಅನಿರ್ದಿಷ್ಟ ಧರಣಿ ಆರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್‌ನ(ಸಿಐಟಿಯು ಸಂಯೋಜಿತ) ನಿರ್ಧರಿಸಿದೆ.

‘ಸಾರಿಗೆ ಸಚಿವರು ನೀಡಿದ್ದ ಭರವಸೆ ಈಡೇರಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಬಿಎಂಟಿಸಿ ಕೇಂದ್ರ ಕಚೇರಿ ಬಳಿ ಧರಣಿ ಆರಂಭಿಸಲು ಗುರುವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಫೆಡರೇಷನ್‌ ಅಧ್ಯಕ್ಷ ಎಚ್‌.ಡಿ. ರೇವಪ್ಪ ತಿಳಿಸಿದ್ದಾರೆ.

‘ಮುಷ್ಕರ ನಡೆಸಿದ್ದಕ್ಕೆ ಸೇಡಿನ ಕ್ರಮವಾಗಿ ‌ಬಿಎಂಟಿಸಿಯಲ್ಲೇ 1,200 ತರಬೇತಿ ಅವಧಿಯ ಸಿಬ್ಬಂದಿ ಸೇರಿ 2 ಸಾವಿರಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಲಾಗಿದೆ. 5 ತಿಂಗಳು ಕಳೆದರೂ ಸೇವೆಯಿಂದ ವಜಾ ಆದವರನ್ನು ಪುನರ್ ನೇಮಕ ಮಾಡಿಲ್ಲ. ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸಾರಿಗೆ ಸಚಿವರು ನೀಡಿದ ಭರವಸೆ ಇನ್ನೂ ಈಡೇರಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ವರ್ಗಾವಣೆ ಮಾಡಿರುವ ಎಲ್ಲರನ್ನೂ ಅದೇ ಸ್ಥಾನಕ್ಕೆ ಮರಳಿ ನೇಮಿಸಬೇಕು. ಅಮಾನತು ಆದವರು ವಾಪಸ್ ಬರಲು ಅವಕಾಶ ನೀಡಬೇಕು. ಶಿಸ್ತು ಪ್ರಕಿಯೆಗಳನ್ನು ರದ್ದುಮಾಡಬೇಕು. ಮುಷ್ಕರದ ಅವಧಿಯನ್ನು ಗೈರು ಹಾಜರಿ ಎಂದು ಪರಿಗಣಿಸಿ ₹2 ಸಾವಿರದಿಂದ ₹10 ಸಾವಿರ ತನಕ ದಂಡ ವಿಧಿಸುವುದನ್ನು ನಿಲ್ಲಿಸಬೇಕು.ಅಧಿಕಾರಿಗಳ ದೌರ್ಜನ್ಯದ ಆಡಳಿತಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.