ಬೆಂಗಳೂರು:‘ಇಲಾಖಾ ಪರೀಕ್ಷಾ ನಿಯಮಾವಳಿ ಮತ್ತು ಪಠ್ಯಕ್ರಮ ತುಂಬಾ ಹಳೆಯದಾಗಿದೆ. 45 ವರ್ಷಗಳಿಂದಲೂ ಒಂದೇ ಪಠ್ಯಕ್ರಮವಿದೆ. ನಿಯಮಾವಳಿಗಳನ್ನು ಪರಿಷ್ಕರಿಸಿ, ನೂತನ ಪಠ್ಯಕ್ರಮ ರಚಿಸಲು ವಿಷಯ ತಜ್ಞರನ್ನು ಒಳಗೊಂಡ ಸಮಿತಿ ರಚಿಸಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ‘ಪರಿಷ್ಕೃತ ನಿಯಮಾವಳಿಗಳು ಲಭ್ಯವಿಲ್ಲದೆ, ಸರ್ಕಾರಿ ನೌಕರರುಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಕ್ರಮಗಳಿಂದ ಪರೀಕ್ಷೆಗಳು ಮೌಲ್ಯ ಕಳೆದುಕೊಳ್ಳುತ್ತಿವೆ’ ಎಂದು ಹೇಳಿದ್ದಾರೆ.
‘ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮಾವಳಿಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆದರೆ, ಪಠ್ಯಕ್ರಮದಲ್ಲಿ ಮಾತ್ರ ಹಳೆಯ, ರದ್ದುಗೊಂಡಿರುವ ಮತ್ತು ಚಾಲ್ತಿಯಲ್ಲಿರದ ನಿಯಮಗಳು ಇನ್ನೂ ಇವೆ. ಉದಾಹರಣೆಗೆ, ಮಾರಾಟ ತೆರಿಗೆ (ಎಸ್ಟಿ), ಮೌಲ್ಯವರ್ಧಿತ ತೆರಿಗೆ (ವ್ಯಾಟ್) ರದ್ದಾಗಿ ಈಗ ಜಿಎಸ್ಟಿ ಬಂದಿದೆ. ಆದರೂ, ಹಳೆಯ ತೆರಿಗೆ ಪದ್ಧತಿಯೇ ಪಠ್ಯಕ್ರಮದಲ್ಲಿದೆ’ ಎಂದು ಅವರು ಹೇಳಿದ್ದಾರೆ.
‘ಸರ್ಕಾರದ ಆಡಳಿತ ಸುಗಮವಾಗಿ ನಡೆಯಬೇಕೆಂದರೆ ಸರ್ಕಾರಿ ಅಧಿಕಾರಿಗಳಿಗೆ ನಿಯಮಾವಳಿಗಳು ಅಥವಾ ಕಾನೂನಿನ ಅರಿವು ಅತಿ ಅಗತ್ಯ. ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ಕಡ್ಡಾಯವಾಗಿದ್ದು, ಸರ್ಕಾರ ಕೂಡಲೇ ಇತ್ತ ಗಮನ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.