ADVERTISEMENT

ಭಾಷೆ, ಸಂಸ್ಕೃತಿ ವಿವಿಗಳು ಇಲಾಖೆ ವ್ಯಾಪ್ತಿಗೆ: ಸಚಿವ ಅರವಿಂದ ಲಿಂಬಾವಳಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 21:11 IST
Last Updated 22 ಫೆಬ್ರುವರಿ 2021, 21:11 IST
ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ದೊಡ್ಡರಂಗೇಗೌಡ, ಹಂಪ ನಾಗರಾಜಯ್ಯ, ಗೊ.ರು.ಚನ್ನಬಸಪ್ಪ, ಹಾಗೂ ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆ ಗೌರವ ಸದಸ್ಯತ್ವ ಪ್ರದಾನ ಮಾಡಲಾಯಿತು. ಸಚಿವ ಅರವಿಂದ ಲಿಂಬಾವಳಿ, ಮನು ಬಳಿಗಾರ್ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಪದ್ಮರಾಜ ದಂಡಾವತಿ, ಮಲ್ಲಿಕಾರ್ಜುನಪ್ಪ, ಕೆ.ರಾಜಕುಮಾರ್ ಇದ್ದಾರೆ.
ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ದೊಡ್ಡರಂಗೇಗೌಡ, ಹಂಪ ನಾಗರಾಜಯ್ಯ, ಗೊ.ರು.ಚನ್ನಬಸಪ್ಪ, ಹಾಗೂ ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆ ಗೌರವ ಸದಸ್ಯತ್ವ ಪ್ರದಾನ ಮಾಡಲಾಯಿತು. ಸಚಿವ ಅರವಿಂದ ಲಿಂಬಾವಳಿ, ಮನು ಬಳಿಗಾರ್ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಪದ್ಮರಾಜ ದಂಡಾವತಿ, ಮಲ್ಲಿಕಾರ್ಜುನಪ್ಪ, ಕೆ.ರಾಜಕುಮಾರ್ ಇದ್ದಾರೆ.   

ಬೆಂಗಳೂರು: ‘ಜಾನಪದ ವಿಶ್ವವಿದ್ಯಾಲಯ ಸೇರಿದಂತೆ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕನ್ನಡ ವಿಶ್ವವಿದ್ಯಾಲಯ, ಸಂಗೀತ ವಿಶ್ವವಿದ್ಯಾಲಯ ಹಾಗೂ ಲಲಿತ ಕಲಾ ವಿಶ್ವವಿದ್ಯಾಲಯಗಳು ಹಾಗೂ ಪ್ರಾಧಿಕಾರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ತರಲು ಚಿಂತನೆ ನಡೆಸಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸೋಮವಾರ ಆಯೋಜಿಸಿದ್ದ ‘ಗೌರವ ಸದಸ್ಯತ್ವ ಪ್ರದಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ವಿಚಾರಗಳು, ಕಲಾವಿದರು ಮತ್ತು ಅವರ ಅಧ್ಯಯನಗಳು ಒಂದೇ ಸೂರಿನಡಿ ಬಂದಾಗ, ಭಾಷೆಯ ಬೆಳವಣಿಗೆ ಹಾಗೂ ಸಂಸ್ಕೃತಿಯ ಅಭಿವೃದ್ಧಿಗೆ ಅನುಕೂಲವಾಗಲಿದೆ’ ಎಂದರು.

ADVERTISEMENT

‘ಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಸಮಯ ಮಗ್ನರಾಗಿರುತ್ತಾರೆ. ಹಾಗಾಗಿ,ಬರಹಗಾರರು ಇ–ಪುಸ್ತಕ ಮತ್ತು ಕಿಂಡಲ್ ಮುಂತಾದ ಎಲೆಕ್ಟ್ರಾನಿಕ್ ಸಾಧನಗಳನ್ನು ಹೆಚ್ಚಾಗಿ ಬಳಸಬೇಕಿದೆ. ದೃಶ್ಯ ಮಾಧ್ಯಮದ ಮೂಲಕವೂ ಸಾಹಿತ್ಯವನ್ನು ಪ್ರಸಾರ ಮಾಡುವ ಕಲೆ ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್,‘ಸಾಹಿತ್ಯ ಪರಿಷತ್ತಿಗೆ ಸರ್ಕಾರವು ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನ ನೀಡುತ್ತಿದೆ’ ಎಂದರು.

ಐದು ಮಂದಿಗೆ ಗೌರವ ಸದಸ್ಯತ್ವ ಪ್ರದಾನ:ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಾಹಿತಿಗಳಾದದೊಡ್ಡರಂಗೇಗೌಡ, ಗೊ.ರು.ಚನ್ನಬಸಪ್ಪ, ಹಂಪ ನಾಗರಾಜಯ್ಯ, ಹಾಗೂ ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆಗೌರವ ಸದಸ್ಯತ್ವ ಪ್ರದಾನ ಮಾಡಲಾಯಿತು. ಸಾಹಿತಿ ವೀಣಾ ಶಾಂತೇಶ್ವರ ಅವರೂ ಈ ಸದಸ್ಯತ್ವಕ್ಕೆ ಭಾಜನರಾಗಿದ್ದಾರೆ. ಗೌರವ ಸದಸ್ಯತ್ವವು ತಲಾ ₹1 ಲಕ್ಷ ನಗದು ಹಾಗೂ ತಾಮ್ರಫಲಕ ಒಳಗೊಂಡಿವೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷದೊಡ್ಡರಂಗೇಗೌಡ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.