ಶಿವಮೊಗ್ಗ:ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಅಪೇಕ್ಷೆ ಪಟ್ಟರೆ ತಪ್ಪೇನಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಪ್ರಶ್ನಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದದಿನ ಬಿಜೆಪಿಯೇತರ ಪಕ್ಷಗಳ ಸಮ್ಮಿಲನಕ್ಕೆ ನಾಂದಿ ಹಾಡಲಾಗಿತ್ತು. ಈಗ ಮಾಯಾವತಿ ಮೈತ್ರಿಯಿಂದ ದೂರ ಹೋಗಿದ್ದಾರೆ ಎಂಬುದು ಬಿಜೆಪಿ ಭ್ರಮೆ. ಎಲ್ಲ ಜಾತ್ಯತೀತ ಪಕ್ಷಗಳಲ್ಲೂ ಒಗ್ಗಟ್ಟಿದೆ. ಅಂತಿಮವಾಗಿ ಕಾಂಗ್ರೆಸ್ ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ ಎಂಬ ಸತ್ಯಅರ್ಥಮಾಡಿಕೊಂಡಿದ್ದೇವೆಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿಶ್ಲೇಷಿಸಿದರು.
ಜಾತ್ಯತೀತ ಪಕ್ಷಗಳ ಮಧ್ಯೆ ಹೊಂದಾಣಿಕೆಯ ನಂತರ ದೇಶದಲ್ಲಿ ನಡೆದ 13 ಉಪ ಚುನಾವಣೆಗಳಲ್ಲಿ 12ರಲ್ಲಿ ಬಿಜೆಪಿಯೇತರ ಪಕ್ಷಗಳು ಗೆಲುವು ಕಂಡಿವೆ. ಕರ್ನಾಟಕದ ಈ ಉಪ ಚುನಾವಣೆ 2019ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ. ಕೊಟ್ಟ ಭರವಸೆ ಉಳಿಸಿಕೊಳ್ಳದ, ದೇಶದ ಆರ್ಥಿಕ ಸ್ಥಿತಿ ನಿಯಂತ್ರಿಸಲು ಸಾಧ್ಯವಾಗದ ಮೋದಿ ಸರ್ಕಾರದ ಹಾವಳಿ ವಿಶ್ಲೇಷಿಸಲೂ ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಅಭಿವೃದ್ಧಿಗಿಂತ ಹಿಂದುತ್ವವನ್ನೇ ನಂಬಿಕೊಂಡಿರುವ ಬಿಜೆಪಿಗೆ ದೇಶದ ಶಾಂತಿ, ಸಹಬಾಳ್ವೆಯ ಮೌಲ್ಯ ಗೊತ್ತಿಲ್ಲ. ತಳ ಸಮುದಾಯ, ಹಿಂದುಳಿದ ವರ್ಗಗಳನ್ನು ಮೊದಲು ಮುಖ್ಯವಾಹಿತಿ ತರಲಿ. ಅವರದೇ ಪಕ್ಷದ ಆಳ್ವಿಕೆಯ ರಾಜ್ಯಗಳಲ್ಲಿ ನಡೆಯುತ್ತಿರುವ ದಲಿತರು, ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲಿ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.