ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂಬ ಕುರಿತು ದಾಖಲಾದ ಪ್ರಕರಣದ (ಸಂಖ್ಯೆ 39/2025 ) ಸಾಕ್ಷಿ ದೂರುದಾರ ಇಲ್ಲಿ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳ ಮುಂದೆ ಶನಿವಾರ ಹಾಜರಾದರು.
ಬಾಡಿಗೆ ಕಾರಿನಲ್ಲಿ ಇಬ್ಬರು ವಕೀಲರೊಂದಿಗೆ ಬಂದ ಸಾಕ್ಷಿ ದೂರುದಾರ ವ್ಯಕ್ತಿ ಇಲ್ಲಿನ ಮಲ್ಲಿಕಟ್ಟೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಬಂಗಲೆಯಲ್ಲಿ ಉಳಿದುಕೊಂಡಿರುವ ಎಸ್ಐಟಿ ಅಧಿಕಾರಿಗಳನ್ನು ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಭೇಟಿಯಾದರು. ಸುಮಾರು 8 ಗಂಟೆಗಳ ಕಾಲ ಪ್ರವಾಸಿ ಮಂದಿರದಲ್ಲೇ ಇದ್ದು ಹೇಳಿಕೆ ನೀಡಿದರು. ಎಸ್ಐಟಿಯಲ್ಲಿರುವ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್. ಅನುಚೇತ್ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದ ಪೊಲೀಸರ ತಂಡವು ಸಾಕ್ಷಿ ದೂರುದಾರನಿಂದ ಹೇಳಿಕೆ ದಾಖಲಿಸಿಕೊಂಡಿತು.
ಸಾಕ್ಷಿ ದೂರುದಾರನನ್ನು ಕರೆದುಕೊಂಡು ಬಂದಿದ್ದ ವಕೀಲರು, ಆತನಿಂದ ಎಸ್ಐಟಿ ಹೇಳಿಕೆ ದಾಖಲಿಸಿಕೊಂಡ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಬಂದ ಬಾಡಿಗೆ ಕಾರಿನಲ್ಲಿ ಸಾಕ್ಷಿ ದೂರುದಾರನ ಜೊತೆ ಅವರು ಸಂಜೆ 7.25ರ ಸುಮಾರಿಗೆ ನಿರ್ಗಮಿಸಿದರು.
ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಲು ಮಲ್ಲಿಕಟ್ಟೆಯ ಪ್ರವಾಸಿ ಬಂಗಲೆಗೆ ಬರುವಾಗ ಹಾಗೂ ಅಲ್ಲಿಂದ ನಿರ್ಗಮಿಸುವಾಗ ಸಾಕ್ಷಿ ದೂರುದಾರ ಮುಖಗವಸು ಹಾಕಿಕೊಂಡಿದ್ದರು. ಆತನಿಂದ ಹೇಳಿಕೆ ದಾಖಲಿಸಿಕೊಂಡ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಎಸ್ಐಟಿಯ ಅಧಿಕಾರಿಗಳು ನಿರಾಕರಿಸಿದರು.
ಧರ್ಮಸ್ಥಳ ಠಾಣೆಗೆ ಅಧಿಕಾರಿಗಳ ಭೇಟಿ: ಎಸ್ಐಟಿ ಅಧಿಕಾರಿಗಳು ಶುಕ್ರವಾರ ರಾತ್ರಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡರು.
ಜಿತೇಂದ್ರ ಕುಮಾರ್ ದಯಾಮ, ಡಿವೈಎಸ್ಪಿ ಲೋಕೇಶ್, ಇನ್ಸ್ಪೆಕ್ಟರ್ ಮಂಜುನಾಥ್ ಹಾಗೂ ಇಬ್ಬರು ಸಿಬ್ಬಂದಿ ಧರ್ಮಸ್ಥಳ ಠಾಣೆಗೆ ಭೇಟಿ ನೀಡಿದ್ದರು. ಸುಮಾರು 2 ಗಂಟೆ ಠಾಣೆಯಲ್ಲೇ ಇದ್ದ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಕಲೆಹಾಕಿದರು. ಬಳಿಕ ಧರ್ಮಸ್ಥಳ ಠಾಣೆಯ ಪಿ.ಎಸ್.ಐ ಸಮರ್ಥ್ ಅವರಿಂದ ದಾಖಲೆಗಳನ್ನು ಪಡೆದುಕೊಂಡು ನಿರ್ಗಮಿಸಿದರು ಎಂದು ಗೊತ್ತಾಗಿದೆ.
‘ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿವೆ. ನನಗೆ ಜೀವಬೆದರಿಕೆ ಒಡ್ಡಿ, ಈ ಅಪರಾಧ ಕೃತ್ಯಗಳ ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿಸಿದ್ದಾರೆ. ಈ ಬಗ್ಗೆ ಪಾಪಪ್ರಜ್ಞೆ ಕಾಡುತ್ತಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಕಾನೂನಾತ್ಮಕವಾಗಿ ರಕ್ಷಣೆ ದೊರೆತ ಕೂಡಲೇ ಈ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ. ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ಸಿದ್ದನಿದ್ದೇನೆ’ ಎಂದು ಸಾಕ್ಷಿ ದೂರುದಾರ ವ್ಯಕ್ತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಜುಲೈ 3ರಂದು ದೂರು ನೀಡಿದ್ದರು. ಸರ್ಕಾರವು ಈ ಪ್ರಕರಣದ ತನಿಖೆಗೆ ಜುಲೈ 20ರಂದು ಎಸ್ಐಟಿಯನ್ನು ರಚಿಸಿದೆ.
ಮೊಹಾಂತಿ ಇಂದು ಜಿಲ್ಲೆಗೆ ಭೇಟಿ?
ಎಸ್ಐಟಿ ಮುಖ್ಯಸ್ಥರಾಗಿರುವ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಅವರು ಭಾನುವಾರ (ಇದೇ 27ರಂದು) ಈ ಪ್ರಕರಣದ ತನಿಖೆ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಸಾಕ್ಷಿ ದೂರುದಾರನಿಂದ ಹೇಳಿಕೆ ಪಡೆದುಕೊಂಡಿರುವ ಎಸ್ಐಟಿ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಲಿರುವ ಅವರು ಈ ಪ್ರಕರಣದ ತನಿಖೆಯಲ್ಲಿ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.