ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿನ ಬಿಜೆಪಿಯ ದ್ವಿಪಾತ್ರಾಭಿನಯಕ್ಕೆ ಆಸ್ಕರ್ ಕೊಟ್ಟರೂ ಕಡಿಮೆಯೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ನಿನ್ನೆ ಬಿಜೆಪಿ ಧರ್ಮಸ್ಥಳದಲ್ಲಿ ಆಯೋಜಿಸಿದ್ದ ಸಮಾವೇಶ ಉದ್ದೇಶಿಸಿ ಅವರು ಎಕ್ಸ್ನಲ್ಲಿ ಪೋಸ್ಟ್ ಮುಖಾಂತರ ಈ ಟೀಕೆ ಮಾಡಿದ್ದಾರೆ.
ಚಿವುಟುವುದೂ ಬಿಜೆಪಿ, ತೊಟ್ಟಿಲು ತೂಗುವುದೂ ಬಿಜೆಪಿ ಎಂದು ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯ ಎಂಬ ಎರಡು ತಲೆಯ ಹಾವು ಎರಡು ಕಡೆಯೂ ಹೆಡೆ ಆಡಿಸುತ್ತಿದೆ, ಬಿಜೆಪಿ ಆರೋಪಿಸುತ್ತಿರುವ ವ್ಯಕ್ತಿಗಳೂ ಬಿಜೆಪಿಯವರೇ. ಗಿರೀಶ್ ಮಟ್ಟಣ್ಣನವರ್, ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಯುವಮೋರ್ಚಾದ ಅಧ್ಯಕ್ಷರಾಗಿದ್ದವರು. 2013ರಲ್ಲಿ ಗುರ್ಮಿಟ್ಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದವರು ಎಂದು ಆರೋಪಿಸಿದ್ದಾರೆ.
ಇನ್ನು ಮಹೇಶ್ ಶೆಟ್ಟಿ ತಿಮರೋಡಿ, ಬಿಜೆಪಿ ಪಕ್ಷದಲ್ಲೇ ಇದ್ದವರು. ಸಂಘಪರಿವಾರದ ನಾಯಕರು. ಸದಾ ಸಾವರ್ಕರ್, ಗೋಲ್ವಾಲ್ಕರ್ ಫೋಟೋ ಇಟ್ಟುಕೊಂಡಿರುವವರು. ಕೇಸರಿ ಶಾಲು ಹಾಕಿಕೊಂಡಿರುವವರು. ಸಾವರ್ಕರ್ ಅನುಯಾಯಿಯ ಬಗ್ಗೆಯೇ ಬಿಜೆಪಿ ಅಸಹನೆ ಹೊಂದಿರುವುದು ಪರಮಾಶ್ಚರ್ಯ ಎಂದು ಲೇವಡಿ ಮಾಡಿದ್ದಾರೆ.
ಇವರೆಲ್ಲಾ ಸಂಘಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರ ಬಣದವರಲ್ಲವೇ? ಅವರ ಅಣತಿಯಂತೆಯೇ ಇವರ ಹೋರಾಟ ನಡೆಯುತ್ತಿರುವುದಲ್ಲವೇ? ಬಿಜೆಪಿ ನಾಯಕರು ಉತ್ತರಿಸಬೇಕು ಎಂದು ತಿವಿದಿದ್ದಾರೆ.
ಬಿಜೆಪಿಯ "ಧರ್ಮಸ್ಥಳ ಚಲೋ" ವೇದಿಕೆಯಲ್ಲಿ ಕರಾವಳಿಯ ಭಾಗದ ನಾಯಕರು ಮಾತನಾಡದೆ ವೇದಿಕೆ ಬಿಟ್ಟು ಹೋಗಿದ್ದೇಕೆ? ಕಲ್ಲಡ್ಕ ಪ್ರಭಾಕರ್ ಭಟ್ ಕಾಣಿಸಿಕೊಂಡಿಲ್ಲ ಏಕೆ? ಇದುವರೆಗೂ ಪ್ರಭಾಕರ್ ಭಟ್ ಧರ್ಮಸ್ಥಳದ ಪರವಾಗಿ ಒಂದೇ ಒಂದು ಹೇಳಿಕೆ ನೀಡದಿರುವುದೇಕೆ? ಕಲ್ಲಡ್ಕ ಭಟ್ಟರಿಗೆ "ಧರ್ಮಸ್ಥಳ" ಬೇಡವಾಗಿದೆಯೇ? ಧರ್ಮಸ್ಥಳ ಇಂದು ಇಬ್ಬರು ಸಂಘಪರಿವಾರದ ಮುಖಂಡರ ಪ್ರತಿಷ್ಠೆಯ ಕಾಳಗದ ಕಣವಾಗಿದೆ. ಹೀಗಿರುವಾಗ ಬಿಜೆಪಿಯ ಹೋರಾಟ, ಹಾರಾಟ, ಚೀರಾಟ ಯಾರ ವಿರುದ್ಧ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.